ಬಂಗಾರಪ್ಪ ಅವರದ್ದು ಸರ್ವಾಧಿಕಾರಿ ಧೋರಣೆ, 1990ರಲ್ಲಿ ತಮ್ಮ ಹತ್ತಿರ 50ಸಾವಿರ ರೂ.ಪಡೆದುಕೊಂಡು ಬಿ ಫಾರಂ ನೀಡಿರುವುದಾಗಿ ಆರೋಪಿಸಿರುವ ಭದ್ರಾವತಿ ಕಾಂಗ್ರೆಸ್ ಶಾಸಕ ಬಿ.ಸಂಗಮೇಶ್, ಬಳಿಕ ನನ್ನ ಸೋಲಿಸಲು ಮತ್ತೊಂದು ಸಿಂಡಿಕೇಟ್ ಕಟ್ಟಿದ ಅತ್ಯಂತ ಕೆಟ್ಟ ರಾಜಕಾರಣಿ ಅವರು ಎಂದು ಹರಿಹಾಯ್ದಿದ್ದಾರೆ. ಗುರುವಾರ ಭದ್ರಾವತಿಯಲ್ಲಿ ಕಾಂಗ್ರೆಸ್ ಪರ ನಡೆಯುತ್ತಿದ್ದ ಚುನಾವಣಾ ಪ್ರಚಾರ ಸಭೆಯಲ್ಲಿ ಶಾಸಕ ಸಂಗಮೇಶ್ ಅವರಿಗೆ ಕುಳಿತುಕೊಳ್ಳಲು ಅವಕಾಶ ನೀಡಿಲ್ಲ ಎಂಬ ಅಸಮಾಧಾನ ಬಂಗಾರಪ್ಪ ಹಾಗೂ ಸಂಗಮೇಶ್ ಬೆಂಬಲಿಗರ ನಡುವೆ ಮಾರಾಮಾರಿ ನಡೆದಿತ್ತು, ಅಲ್ಲದೇ ಬಂಗಾರಪ್ಪ ಅವರ ಎದೆಗೆ ಕಲ್ಲೇಟು ಕೂಡ ಬಿದ್ದಿತ್ತು. ಪೊಲೀಸರು ನಡೆಸಿದ ಲಾಠಿ ಚಾರ್ಚ್ನಲ್ಲಿ ನಾಲ್ವರು ಪತ್ರಕರ್ತರು ಸೇರಿದಂತೆ ಹಲವು ಮಂದಿ ಗಾಯಗೊಂಡಿದ್ದರು. ನಿನ್ನೆ ನಡೆದ ಘಟನೆಗೆ ಬಂಗಾರಪ್ಪ ಅವರೇ ನೇರ ಹೊಣೆಗಾರರು ಎಂದು ಸಂಗಮೇಶ್ ತಿಳಿಸಿದ್ದಾರೆ.ಘಟನೆಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ತಮ್ಮ ವಿರುದ್ಧ ಏಕವಚನದಲ್ಲಿ ಲಘುವಾಗಿ ಮಾತನಾಡಿದ್ದನ್ನು ಸಹಿಸದ ಬೆಂಬಲಿಗರು ಗಲಾಟೆ ನಡೆಸಿದರು ಎಂದು ಸ್ಪಷ್ಟನೆ ನೀಡಿದರು. ಸ್ವಾರ್ಥಕ್ಕಾಗಿ ಪಕ್ಷಾಂತರ ಮಾಡಿದ ಬಂಗಾರಪ್ಪ ಇಂದು ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬರಲು ಕಾರಣರಾಗಿದ್ದಾರೆ. ಅಲ್ಪಸಂಖ್ಯಾತರನ್ನು ಖರೀದಿಸಿದಂತೆ ಮಾತನಾಡುತ್ತಿರುವ ಬಂಗಾರಪ್ಪ ಆ ಜನಾಂಗದ ಅಭಿವೃದ್ಧಿಗೆ ಏನು ಮಾಡಿದ್ದಾರೆ ಎಂದು ಪ್ರಶ್ನಿಸಿದರು. ಚುನಾವಣೆ ಸಂದರ್ಭದಲ್ಲಿ ಬರೀ ಸುಳ್ಳು ಹೇಳಿಕೊಂಡು ತಿರುಗಾಡುವ ಚಾಳಿಯನ್ನು ಬೆಳೆಸಿಕೊಂಡಿದ್ದಾರೆ ಎಂದು ಸಂಗಮೇಶ್ ದೂರಿದರು. |