ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಮತದಾರರ ಪಟ್ಟಿಯಲ್ಲಿ ಲೋಪ ಕಂಡು ಬಂದ ಹಿನ್ನೆಲೆಯಲ್ಲಿ ಕ್ಷೇತ್ರದ 33 ಕಡೆಗಳಲ್ಲಿ ಮರು ಮತದಾನ ನಡೆಸಬೇಕೆಂದು ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಕೃಷ್ಣ ಬೈರೇಗೌಡ ಆಗ್ರಹಿಸಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎಪಿಕ್ ಕಾರ್ಡ್ ಹೊಂದಿರುವ ಸಾವಿರಾರು ಮತದಾರರ ಹೆಸರನ್ನು ಕೊನೆಗಳಿಗೆಯಲ್ಲಿ ಮತದಾರರ ಪಟ್ಟಿಯಿಂದ ಕೈ ಬಿಡುವ ಮೂಲಕ ಮತದಾರರ ಮೂಲಭೂತ ಹಕ್ಕನ್ನು ಕಸಿದುಕೊಳ್ಳಲಾಗಿದೆ ಎಂದು ರಾಜ್ಯ ಚುನಾವಣಾ ಆಯೋಗಕ್ಕೆ ದೂರು ಸಲ್ಲಿಸಿದ್ದಾರೆ.
ಈ ಬಗ್ಗೆ ತಕ್ಷಣವೇ ಆಯೋಗಕ್ಕೆ ಮಾಹಿತಿ ನೀಡಿದ್ದರೂ, ಯಾವುದೇ ಸೂಕ್ತ ಕ್ರಮವನ್ನು ಕೈಗೊಂಡಿಲ್ಲ ಎಂದು ಆರೋಪಿಸಿದ ಅವರು, ಇದರಿಂದಾಗಿ ಕ್ಷೇತ್ರದ ಅಲ್ಪಸಂಖ್ಯಾತರು ಹಾಗೂ ದುರ್ಬಲ ವರ್ಗದ ಸಾವಿರಾರು ಮತದಾರರು ಮತದಾನದ ಹಕ್ಕನ್ನು ಕಳೆದುಕೊಂಡಿದ್ದಾರೆ ಎಂದು ಆರೋಪಿಸಿದರು.
ಈ ಮೊದಲು ಅಂದರೆ 2009ರ ಏಪ್ರಿಲ್ 1ರಂದು ತಮಗೆ ಒದಗಿಸಲಾದ ಮತದಾರರ ಪಟ್ಟಿಗೂ ಚುನಾವಣೆ ದಿನ ಕಂಡು ಬಂದ ಮತದಾರರ ಪಟ್ಟಿಗೂ ಬಹಳಷ್ಟು ವ್ಯತ್ಯಾಸಗಳಿವೆ. ಗುರುತಿನ ಚೀಟಿ ಹೊಂದಿರುವ ಸಾವಿರಾರು ಮತದಾರರ ಹೆಸರಿನ ಮುಂದೆ ಡಿಲಿಟೆಡ್ ಎಂದು ಷರಾ ಹಾಕಲಾಗಿದೆ ಎಂದು ಅವರು ತಿಳಿಸಿದ್ದಾರೆ.
ಇದೇ ವೇಳೆ ಮತದಾನದ ವೇಳೆ ನಡೆದ ಅಕ್ರಮಗಳ ಬಗೆಗಿನ ದೂರು ಪರಿಷ್ಕರಣೆ ಶುಕ್ರವಾರ ನಡೆಯಲಿದ್ದು, ಈ ಬಗ್ಗೆ ವೀಕ್ಷಕರೇ ಅಂತಿಮ ತೀರ್ಮಾನ ಕೈಗೊಳ್ಳಲಿದ್ದಾರೆ ಎಂದು ರಾಜ್ಯದ ಮುಖ್ಯ ಚುನಾವಣಾಧಿಕಾರಿ ವಿದ್ಯಾಶಂಕರ್ ತಿಳಿಸಿದ್ದಾರೆ. |