ನಟೋರಿಯಸ್ ಭೂಗತ ಪಾತಕಿ ದಾವೂದ್ ಇಬ್ರಾಹಿಂ ನಿಕಟವರ್ತಿ ರಶೀದ್ ಮಲಬಾರಿ ಪರ ವಕೀಲ ನೌಶಾದ್ ಶೂಟೌಟ್ ಪ್ರಕರಣಕ್ಕೆ ಸಂಬಂಧಿಸಿದಂತೆ ಮಂಗಳೂರು ಪೊಲೀಸರು ಆರು ಮಂದಿಯನ್ನು ಬಂಧಿಸಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.
ಇತ್ತೀಚೆಗೆ ಮಂಗಳೂರಿನ ಪಳ್ನೀರ್ ಸಮೀಪ ಮಲಬಾರಿ ಪರ ವಕೀಲರಾಗಿದ್ದ ಭಟ್ಕಳ ಮೂಲದ ನೌಶಾದ್ ಅವರನ್ನು ದುಷ್ಕರ್ಮಿಗಳು ಏಪ್ರಿಲ್ 9ರಂದು ಹತ್ಯೆಗೈದಿದ್ದರು. ಈ ಕೊಲೆಗೆ ತಾನೇ ಮಾಡಿಸಿರುವುದಾಗಿ ಭೂಗತ ಪಾತಕಿ ರವಿ ಪೂಜಾರಿ ಮಾಧ್ಯಮಗಳಿಗೆ ತಿಳಿಸಿದ್ದ.
ರವಿ ಪೂಜಾರಿ ಹೇಳಿಕೆಯ ಹಿನ್ನೆಲೆಯಲ್ಲಿ ಕಾರ್ಯಾಚರಣೆ ನಡೆಸಿದ ದಕ್ಷಿಣ ಕನ್ನಡ ಪೊಲೀಸರು ಈಗಾಗಲೇ ಸುಮಾರು ನೂರಕ್ಕೂ ಅಧಿಕ ಮಂದಿಯನ್ನು ವಿಚಾರಣೆಗೊಳಪಡಿಸಿದ್ದರು. ಬುಧವಾರ ಸಂಜೆ ಆರು ಮಂದಿಯನ್ನು ವಶಕ್ಕೆ ತೆಗೆದುಕೊಂಡು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.
ಬಂಧಿತರನ್ನು ಬೆಳ್ತಂಗಡಿ ಆಸುಪಾಸಿನ ನಿವಾಸಿಗಳಾದ ದಿನೇಶ್, ರಿತೇಶ್, ಪ್ರತಾಪ್, ಗಣೇಶ್, ಸುಬ್ರಹ್ಮಣ್ಯ ಹಾಗೂ ಶಿವಪ್ರಕಾಶ್ ಎಂದು ಗುರುತಿಸಲಾಗಿದ್ದು, ಇವರೆಲ್ಲ ಭೂಗತ ಪಾತಕಿ ರವಿ ಪೂಜಾರಿ ಗ್ಯಾಂಗ್ಗೆ ಸಂಪರ್ಕ ಹೊಂದಿದವರೆನ್ನಲಾಗಿದೆ. ಬಂಧಿತರಿಂದ ಮೂರು 9ಎಂಎಂ ಪಿಸ್ತೂಲ್, 8ಸಜೀವ ಗುಂಡು, 3.5ಲಕ್ಷ ರೂ.ನಗದು ಹಾಗೂ ಕಾರೊಂದನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ ಎಂದು ಪೊಲೀಸ್ ವರಿಷ್ಠಾಧಿಕಾರಿ ಗೋಪಾಲ್ ಹೊಸೂರ್ ಸುದ್ದಿಗಾರರೊಂದಿಗೆ ಮಾತನಾಡುತ್ತ ತಿಳಿಸಿದ್ದಾರೆ. |