ರಾಜ್ಯದಲ್ಲಿ ನಡೆದ ಮೊದಲ ಹಂತದ ಚುನಾವಣೆಯ 17 ಲೋಕಸಭಾ ಕ್ಷೇತ್ರಗಳ ಪೈಕಿ 14 ಕ್ಷೇತ್ರಗಳಲ್ಲಿ ಬಿಜೆಪಿ ಗೆಲುವು ಸಾಧಿಸಲಿದೆ ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಜಿಲ್ಲೆಯ ಪುತ್ತೂರು ತಾಲೂಕಿನಲ್ಲಿ ನಡೆದ ಬಿಜೆಪಿ ಪ್ರಚಾರ ಆಂದೋಳನದಲ್ಲಿ ಭಾಗವಹಿಸಿ ಮಾತನಾಡಿದ ಅವರು, ದೇಶದಲ್ಲಿ ಎನ್ಡಿಎ ಸರ್ಕಾರದ ಸಂದರ್ಭದಲ್ಲಿ ದೇಶಕ್ಕಾಗಿ ನಾನು ಎಂಬ ಭಾವನೆ ಇತ್ತು. ಆದರೆ ಯುಪಿಎ ಸರ್ಕಾರ ಆಡಳಿತಕ್ಕೆ ಬಂದ ಮೇಲೆ ನನಗಾಗಿ ದೇಶ ಎಂದು ಬದಲಿಸಿಕೊಂಡರು. ಯುವಕರಲ್ಲಿ ದೇಶಭಕ್ತಿಯನ್ನು ಹೋಗಲಾಡಿಸುವಂತೆ ಮಾಡಿದವರು ಕಾಂಗ್ರೆಸ್ಸಿಗರೇ ಎಂದು ಕಾಂಗ್ರೆಸ್ ವಿರುದ್ಧ ಹರಿಹಾಯ್ದರು.
ಈ ಹಿಂದೆ ವಾಜಪೇಯಿ ಸರ್ಕಾರದ ಮಾದರಿಯನ್ನು ಮುಂದಿನ ದಿನಗಳಲ್ಲಿ ಆಡ್ವಾಣಿ ಮುಂದುವರಿಸಿಕೊಂಡು ಹೋಗಲಿದ್ದಾರೆ ಎಂದು ಅವರು ಇದೇ ಸಂದರ್ಭದಲ್ಲಿ ತಿಳಿಸಿದರು.
ಪ್ರಜಾತಂತ್ರ ವ್ಯವಸ್ಥೆಯಲ್ಲಿ ಪ್ರಾದೇಶಿಕ ಪಕ್ಷಗಳು ಹೆಚ್ಚಾಗುತ್ತಿರುವುದು ಅಭಿವೃದ್ದಿಗೆ ಮಾರಕವಾಗಿದೆ. ದೇಶದ ಮುನ್ನಡೆಗೆ ಎರಡೇ ಎರಡು ರಾಷ್ಟ್ರೀಯ ಪಕ್ಷಗಳು ಸಾಕು. ಒಂದು ಆಡಳಿತ ಹಾಗೂ ಇನ್ನೊಂದು ಪ್ರತಿಪಕ್ಷ ಎಂದರು.
|