ಕಾಂಗ್ರೆಸ್ ಹಿರಿಯ ಮುಖಂಡ ಮಲ್ಲಿಕಾರ್ಜುನ ಖರ್ಗೆ ಅವರ ಪದತ್ಯಾಗ ವಿಷಯವನ್ನು ದುರ್ಬಳಕೆ ಮಾಡುತ್ತಿರುವ ಬಿಜೆಪಿ ದಲಿತರೊಬ್ಬರನ್ನು ಸಿಎಂ ಮಾಡಲಿ ಇಲ್ಲವೇ ಬಿಜೆಪಿ ಅಧ್ಯಕ್ಷ ಸ್ಥಾನವನ್ನು ದಲಿತರಿಗೆ ನೀಡಲಿ ಎಂದು ರಾಜ್ಯ ಕಾಂಗ್ರೆಸ್ ಉಸ್ತುವಾರಿ ವಹಿಸಿರುವ ಗುಲಾಂ ನಬಿ ಆಜಾದ್ ಸವಾಲು ಹಾಕಿದ್ದಾರೆ.
ಹುಬ್ಬಳ್ಳಿಯಲ್ಲಿ ಶುಕ್ರವಾರ ಪಕ್ಷದ ಕಚೇರಿಯಲ್ಲಿ ನಡೆದ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರು ಸಿಎಂ ಹುದ್ದೆಯಿಂದ ಕೆಳಗಿಳಿದು, ಆ ಅವಕಾಶವನ್ನು ದಲಿತರಿಗೆ ಕಲ್ಪಿಸಿಕೊಡಲಿ ಎಂದ ಆಜಾದ್, ಇದೀಗ ಭಾರತೀಯ ಜನತಾ ಪಕ್ಷ ದಲಿತರ ಮತ ಗಳಿಸಲು ಹರಸಾಹಸ ಪಡುತ್ತಿದೆ ಎಂದು ವ್ಯಂಗ್ಯವಾಡಿದರು.
ಹಿಂದುಳಿದ ವರ್ಗದ ಜನರ ಭಾವನೆಗಳೊಂದಿಗೆ ಚಲ್ಲಾಟವಾಡುವ ಬಿಜೆಪಿ ತಾಕತ್ತಿದ್ದರೆ ಬಿಜೆಪಿ ಅಧ್ಯಕ್ಷ ಸ್ಥಾನವನ್ನು ದಲಿತರೊಬ್ಬರಿಗೆ ನೀಡಲಿ ಎಂದು ಸವಾಲೆಸೆದ ಅವರು, ಕಾಂಗ್ರೆಸ್ನಲ್ಲಿ ದಲಿತರಿಗೆ ಸೂಕ್ತ ಸ್ಥಾನಮಾನ ದೊರೆಯುತ್ತಿದೆ. ಇದೀಗ ದಲಿತರ ಮತಬ್ಯಾಂಕ್ ಮೇಲೆ ಕಣ್ಣಿಟ್ಟಿರುವ ಬಿಜೆಪಿ ಮೊಸಳೆ ಕಣ್ಣೀರು ಸುರಿಸುತ್ತಿದೆ ಎಂದು ಟೀಕಿಸಿದರು. |