ಚುನಾವಣಾ ಪ್ರಚಾರ ಸಂದರ್ಭದಲ್ಲಿ ಒಬ್ಬರು ಇನ್ನೊಬ್ಬರು ಮೇಲೆ ಕೆಸರೆಚಾಟ ಮಾಡುವುದು ಸಾಮಾನ್ಯವಾಗಿರುವ ನಡುವೆಯೇ ಮಂಗಳೂರು ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ನಳಿನ್ ಕುಮಾರ್ ಕಟೀಲ್, ಕಾಂಗ್ರೆಸ್ ಅಭ್ಯರ್ಥಿ ಜನಾರ್ದನ ಪೂಜಾರಿಯವರ ಕಾಲಿಗೆ ಬಿದ್ದು ಆಶೀರ್ವಾದ ಪಡೆದ ಘಟನೆ ಶುಕ್ರವಾರ ನಡೆದಿದೆ.ಶುಕ್ರವಾರ ಬೆಳಿಗ್ಗೆ ತೊಕ್ಕೊಟ್ಟಿನಲ್ಲಿ ಪೂಜಾರಿ ಕಾರ್ಯಕರ್ತರೊಂದಿಗೆ ಚುನಾವಣಾ ಪ್ರಚಾರ ಕೈಗೊಂಡಿದ್ದರು. ಇದೇ ಸಂದರ್ಭದಲ್ಲಿ ಪಾದಯಾತ್ರೆ ಮೂಲಕ ಆಗಮಿಸಿದ ನಳಿನ್ ಕುಮಾರ್ ತೊಕ್ಕೊಟ್ಟು ಬಳಿ ಮತಯಾಚಿಸುತ್ತಿದ್ದರು. ಪೂಜಾರಿ, ಸುದ್ದಿಗಾರರೊಂದಿಗೆ ಮಾತನಾಡಿ ಹೊರಡಲು ಅನುವಾದಾಗ ನಳಿನ್, ಇದ್ದಕ್ಕಿದ್ದಂತೆ ಪೂಜಾರಿಯವರ ಬಳಿ ಬಂದು ಕಾಲು ಹಿಡಿದು ಆಶೀರ್ವಾದ ಪಡೆದು, ಮೂರು ನಿಮಿಷಗಳ ಕಾಲ ಮಾತುಕತೆ ನಡೆಸಿದರು.ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ನಳಿನ್, ನನಗೂ ಮತ್ತು ಪೂಜಾರಿಯವರಿಗೆ ಪಕ್ಷದ ಸಂಬಂಧ ತಾತ್ವಿಕ ಭಿನ್ನತೆಯಿದ್ದರೂ, ವೈಯಕ್ತಿಕವಾಗಿ ದ್ವೇಷವಿಲ್ಲ. ಒಬ್ಬ ಕಿರಿಯನಾಗಿ ಹಿರಿಯರ ಆಶೀರ್ವಾದ ಪಡೆಯುವುದು ಸಹಜ. ಅವರನ್ನು ನೋಡಿದ ಮೇಲೆ ಅವರಿಗೆ ಗೌರವ ಕೊಡದೆ ಮುಂದೆ ಹೊರಡಲು ಮನಸ್ಸಾಗಲಿಲ್ಲ ಎಂದು ಹೇಳಿದರು. |