ಶುಕ್ರವಾರ ಭದ್ರಾವತಿಯಲ್ಲಿ ನಡೆದ ಬಂಗಾರಪ್ಪ ಮತ್ತು ಶಾಸಕ ಸಂಗಮೇಶ್ ಬೆಂಬಲಿಗರ ನಡುವೆ ನಡೆದ ಗಲಭೆ ಈಗ ರಾಜಕೀಯ ತಿರುವು ಪಡೆದುಕೊಂಡಿದೆ. ಈ ಗಲಭೆಗೆ ಬಿಜೆಪಿಯೇ ಕಾರಣ. ಇದನ್ನು ಸಿಬಿಐ ತನಿಖೆಗೆ ಒಪ್ಪಿಸಬೇಕೆಂದು ಮಾಜಿ ಮುಖ್ಯಮಂತ್ರಿ ಬಂಗಾರಪ್ಪ ಆಗ್ರಹಿಸಿದ್ದಾರೆ.
ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಘಟನೆಯ ಹಿಂದೆ ಬಿಜೆಪಿ ಕೈವಾಡವಿರುವುದು ಸ್ಪಷ್ಟವಾಗಿದೆ. ಶಾಸಕ ಸಂಗಮೇಶ್ ಅವರ ಮಕ್ಕಳು, ತಮ್ಮ, ಎಲ್ಲರೂ ಬಿಜೆಪಿ ಸೇರಿದ್ದಾರೆ ಎಂದು ಆರೋಪಿಸಿದರು.
ಈ ಬಗ್ಗೆ ಪ್ರತಿಕ್ರಿಯಿಸಿರುವ ವಿಧಾನ ಪರಿಷತ್ ಪ್ರತಿಪಕ್ಷ ನಾಯಕ ವಿ.ಎಸ್.ಉಗ್ರಪ್ಪ, ಬಿಜೆಪಿ ಕಾರ್ಯಕರ್ತರು ಭದ್ರಾವತಿಯಲ್ಲಿ ಕಾಂಗ್ರೆಸ್ ಸಮಾವೇಶದ ವೇಳೆ ಉದ್ದೇಶಪೂರ್ವಕವಾಗಿ ದಾಂದಲೆ ಎಬ್ಬಿಸಿದ್ದು, ಈ ಘಟನೆ ಕುರಿತು ಸಿಬಿಐ ತನಿಖೆ ನಡೆಸುವಂತೆ ತಿಳಿಸಿದ್ದಾರೆ.
ಭದ್ರಾವತಿಯಲ್ಲಿ ನಡೆದ ಕಾಂಗ್ರೆಸ್ ಸಭೆಯೊಳಗೆ ಶಾಸಕ ಸಂಗಮೇಶ್ ಹಾಗೂ ಬಂಗಾರಪ್ಪ ನಡುವೆ ನಡೆದ ಮಾತಿನ ಚಕಮಕಿಯನ್ನೇ ನೆಪವಾಗಿಟ್ಟುಕೊಂಡು ಬಿಜೆಪಿ ದುಷ್ಕಮಿಗಳು ಈ ಘಟನೆಗೆ ಕಾರಣರಾಗಿದ್ದಾರೆ. ಈ ಬಗ್ಗೆ ಚುನಾವಣಾ ಆಯೋಗ ಚಿತ್ರೀಕರಿಸಿರುವ ವಿಡಿಯೋ ದೃಶ್ಯಾವಳಿ ನೋಡಿದರೆ ಸತ್ಯಾಂಶ ಬಹಿರಂಗವಾಗುತ್ತದೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ಸಾಗರ ತಾಲೂಕು ತಾಳಗುಪ್ಪದಲ್ಲಿ ಬಿಜೆಪಿ ಪ್ರಚಾರ ಸಭೆಯಲ್ಲಿ ಮಾತನಾಡಿ, ಕಾಂಗ್ರೆಸ್ನಲ್ಲಿನ ಒಳಜಗಳದಿಂದ ಈ ಘಟನೆ ನಡೆದಿದೆ. ಇದರಲ್ಲಿ ಬಿಜೆಪಿಯ ಯಾವುದೇ ಕೈವಾಡವಿಲ್ಲ. ವಿರೋಧಿಗಳು ದುರುದ್ದೇಶದಿಂದ ಬೊಟ್ಟು ಮಾಡುತ್ತಿದ್ದಾರೆ ಎಂದು ಅವರು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ದೂರಿದ್ದಾರೆ. |