ದೇಶದ ರಾಜಕಾರಣದಲ್ಲಿ ಸಾಕಷ್ಟು ವ್ಯತ್ಯಾಸವಾಗಿದ್ದು, ಈ ಬಾರಿ ರಾಷ್ಟ್ರ ರಾಜಕಾರಣದಲ್ಲಿ ಅಚ್ಚರಿಯ ಫಲಿತಾಂಶ ಬರಲಿದೆ ಎಂದು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಭವಿಷ್ಯ ನುಡಿದರು.
ರಾಷ್ಟ್ರ ರಾಜಕಾರಣದಲ್ಲಿ ತೃತೀಯ ರಂಗ ತನ್ನ ಛಾಪು ಮೂಡಿಸಲಿದ್ದು, ತೃತೀಯ ರಂಗದ ವ್ಯಕ್ತಿಯೇ ಪ್ರಧಾನಮಂತ್ರಿ ಆಗಲಿದ್ದಾರೆ ಎಂದು ಅವರು ಈ ಸಂದರ್ಭದಲ್ಲಿ ವಿಶ್ವಾಸ ವ್ಯಕ್ತಪಡಿಸಿದರು. ಕಾಂಗ್ರೆಸ್ ಮತ್ತು ಬಿಜೆಪಿ ಹೊರತಾದ ರಚನೆಯಾಗಲಿದ್ದು, ಇದರಲ್ಲಿ ಯಾವುದೇ ಅನುಮಾನವೇ ಬೇಡ ಎಂದು ಹೇಳಿದರು.
ಇಂದಿನ ರಾಜಕಾರಣ ಹೀನಾಯ ಸ್ಥಿತಿ ತಲುಪಿದೆ, ಹೀಗಾಗಿ ರಾಜಕೀಯ ಪಕ್ಷಗಳ ಭರವಸೆಯಿಂದ ಜನ ಬೇಸತ್ತಿದ್ದಾರೆ. ಹೊಸದನ್ನು ಬಯಸುತ್ತಿದ್ದಾರೆ. ಜನರೆದುರು ಯಾವುದೇ ಪರ್ಯಾಯ ವ್ಯವಸ್ಥೆ ಇರಲಿಲ್ಲವಾಗಿತ್ತು. ಈ ಬಾರಿಯ ಚುನಾವಣೆಯಲ್ಲಿ ತೃತೀಯ ರಂಗ ಆ ಸ್ಥಾನ ತುಂಬುವ ಕೆಲಸ ಮಾಡಲಿದೆ ಎಂದರು.
ಉತ್ತರ ಪ್ರದೇಶ, ಬಿಹಾರ, ತಮಿಳುನಾಡು, ಪಶ್ಚಿಮಬಂಗಾಲ, ಆಂಧ್ರಪ್ರದೇಶ, ಮಹಾರಾಷ್ಟ್ರದಲ್ಲಿ ಕಾಂಗ್ರೆಸ್ ದುರ್ಬಲಗೊಂಡಿದೆ. ಅವೆಲ್ಲ ತೃತೀಯ ರಂಗಕ್ಕೆ ಅನುಕೂಲಕರ ವಾತಾವರಣ ಕಲ್ಪಿಸಿಕೊಡಲಿದೆ ಎಂದು ಹೇಳಿದರು. |