ರಾಜ್ಯದಲ್ಲಿ ಏಪ್ರಿಲ್ 30ರಂದು ನಡೆಯಲಿರುವ ಎರಡನೇ ಹಂತದ ಚುನಾವಣಾ ಪ್ರಚಾರದ ಅಬ್ಬರ ತೀವ್ರಗೊಂಡಿದ್ದು, ಪ್ರಚಾರದ ಮುಕ್ತಾಯಕ್ಕೆ ಕೇವಲ 2ದಿನ ಬಾಕಿ ಉಳಿದಿದ್ದು, ಅಭ್ಯರ್ಥಿಗಳು ಆರೋಪ-ಪ್ರತ್ಯಾರೋಪಗಳಲ್ಲಿ ತೊಡಗಿದ್ದಾರೆ.ಮತ ಸೆಳೆಯುವ ನಿಟ್ಟಿನಲ್ಲಿ ಸಮಾವೇಶ, ರೋಡ್ ಶೋ, ಮನೆ,ಮನೆಗೆ ತೆರಳುವುದು ಸೇರಿದಂತೆ ಎಲ್ಲಾ ರಾಜಕೀಯ ಪಕ್ಷಗಳು ವಿವಿಧ ರೀತಿಯಲ್ಲಿ ಮತಯಾಚನೆಯಲ್ಲಿ ತೊಡಗಿವೆ. ಬಿಜೆಪಿ ರಾಷ್ಟ್ರೀಯ ನಾಯಕರಾದ ಎಲ್.ಕೆ.ಆಡ್ವಾಣಿ ಶನಿವಾರ ಹುಬ್ಬಳ್ಳಿ, ಧಾರವಾಡ, ಹಾಸನಗಳಲ್ಲಿ ಮಿಂಚಿನ ಪ್ರಚಾರ ನಡೆಸಿದರು. ಇಂದು ಕಾಂಗ್ರೆಸ್ ವರಿಷ್ಠೆ ಸೋನಿಯಾಗಾಂಧಿ ಮಂಗಳೂರಿನಲ್ಲಿ ಅಬ್ಬರದ ಪ್ರಚಾರಕ್ಕೆ ಇಳಿದಿದ್ದಾರೆ. ಕಾಂಗ್ರೆಸ್, ಬಿಜೆಪಿ, ಜೆಡಿಎಸ್ 11 ಕ್ಷೇತ್ರಗಳಲ್ಲಿ ಜಿದ್ದಾಜಿದ್ದಿನ ಪ್ರಚಾರದಲ್ಲಿ ತೊಡಗಿವೆ, ಮಾಜಿ ಸಚಿವ ವಿಶ್ವನಾಥ್, ಎಸ್.ಎಂ.ಕೃಷ್ಣ, ಡಿ.ಕೆ.ಶಿವಕುಮಾರ್, ಮುಖ್ಯಮಂತ್ರಿ, ಯಡಿಯೂರಪ್ಪ, ಬಂಗಾರಪ್ಪ, ಸದಾನಂದ ಗೌಡ, ದೇವೇಗೌಡ, ಚಲುವರಾಯಸ್ವಾಮಿ, ಅಂಬರೀಷ್ ಸೇರಿದಂತೆ ಘಟಾನುಘಟಿಗಳು ಮತಭಿಕ್ಷೆಯಲ್ಲಿ ತೊಡಗಿದ್ದಾರೆ. ಎರಡನೇ ಹಂತದಲ್ಲಿ ಮಂಡ್ಯ, ಹಾಸನ, ಚಾಮರಾಜನಗರ(ಎಸ್ಸಿ), ದಕ್ಷಿಣ ಕನ್ನಡ, ಉಡುಪಿ, ಚಿಕ್ಕಮಗಳೂರು, ಶಿವಮೊಗ್ಗ, ದಾವಣಗೆರೆ, ಧಾರವಾಡ, ಹಾವೇರಿ ಹಾಗೂ ಬಾಗಲಕೋಟೆ ಲೋಕಸಭಾ ಕ್ಷೇತ್ರಗಳಿಗೆ ಚುನಾವಣೆ ನಡೆಯಲಿದೆ. ಅಖಾಡದಲ್ಲಿ ಮಾಜಿ ಪ್ರಧಾನಿ, ಮಾಜಿ ಸಿಎಂ ದೇವೇಗೌಡ, ಮಾಜಿ ಸಿಎಂ ಬಂಗಾರಪ್ಪ, ಯಡಿಯೂರಪ್ಪ ಪುತ್ರ ರಾಘವೇಂದ್ರ, ನಟ ಅಂಬರೀಶ್, ಮಾಜಿ ಸಚಿವ ಜನಾರ್ದನ ಪೂಜಾರಿ, ಬಿಜೆಪಿ ರಾಜ್ಯಾಧ್ಯಕ್ಷ ಡಿ.ವಿ.ಸದಾನಂದ ಗೌಡ, ಚಲುವರಾಯ ಸ್ವಾಮಿ ಸೇರಿದಂತೆ ಹಲವು ಪ್ರಮುಖರಿದ್ದಾರೆ. |