ಸಚಿವರಾದ ಜಿ.ಜನಾರ್ದನರೆಡ್ಡಿ, ಜಿ.ಕರುಣಾಕರರೆಡ್ಡಿ ಮತ್ತು ಬಿ.ಶ್ರೀರಾಮುಲು ಒಡೆತನದ ಓಬಳಾಪುರಂ ಮೈನಿಂಗ್ ಕಂಪನಿ ಸೇರಿದಂತೆ ಐದು ಕಂಪನಿಗಳ ಗಣಿಗಾರಿಕೆಯನ್ನು ತಕ್ಷಣವೇ ಸ್ಥಗಿತಗೊಳಿಸುವಂತೆ ಕೇಂದ್ರ ಪರಿಸರ ಮತ್ತು ಅರಣ್ಯ ಇಲಾಖೆ ಆಂಧ್ರಪ್ರದೇಶ ಸರ್ಕಾರಕ್ಕೆ ತಾಕೀತು ಮಾಡಿದೆ.
ಆಂಧ್ರಪ್ರದೇಶದ ಅನಂತಪುರ ಜಿಲ್ಲೆಯ ಡಿಎಫ್ ಓ ಅವರ ಸಹಕಾರದಿಂದ ಅರಣ್ಯ ಸಂರಕ್ಷಣಾ ಕಾಯ್ದೆ, ಗಣಿ ಕಂಪನಿಗಳ ಸುರಕ್ಷಾ ವಲಯ ನಿಯಮ ಮತ್ತು ಗಡಿ ಭಾಗಗಳನ್ನು ಉಲ್ಲಂಘಿಸಿರುವ ಆರೋಪದ ಮೇಲೆ ಈ ಕ್ರಮ ಕೈಗೊಳ್ಳಲಾಗಿದೆ. ಅಂತರರಾಜ್ಯದ ಗಡಿಭಾಗದಲ್ಲಿ ಆಂಧ್ರ ಸರ್ಕಾರವು ಓಬಳಾಪುರಂ ಮೈನಿಂಗ್ ಕಂಪನಿ , ಬಳ್ಳಾರಿ ಕಬ್ಬಿಣ ಅದಿರು ಕಂಪನಿ ,ವೈ.ಮಹಾಬಲೇಶ್ವರಪ್ಪ ಅಂಡ್ ಸನ್ಸ್ ಮತ್ತು ಅನಂತಪುರ ಮೈನಿಂಗ್ ಕಾರ್ಪೊರೇಷನ್ ಕಂಪನಿಗಳ ಗುತ್ತಿಗೆಯನ್ನು ತಕ್ಷಣ ಅಮಾನತುಗೊಳಿಸಲು ಆದೇಶಿಸಲಾಗಿದೆ.
ಸಚಿವರ ಮಾಲೀಕತ್ವದ ಅಂತಾರಾಜ್ಯ ಗಡಿ ಭಾಗದಲ್ಲಿ ಅಕ್ರಮ ಗಣಿಗಾರಿಕೆ ನಡೆಯುತ್ತಿದೆ ಎಂಬ ಆರೋಪದ ಬಗ್ಗೆ ಸ್ಪಷ್ಟವಾಗಿ ತಿಳಿಯಲು ಭಾರತೀಯ ಸರ್ವೇ ಇಲಾಖೆಯಿಂದ ಸಮೀಕ್ಷೆ ನಡೆಯಬೇಕಿದೆ. ಗಡಿ ಗುರುತಿಸುವ ಪ್ರಕ್ರಿಯೆ ಅಂತ್ಯ ಗೊಳ್ಳುವವರೆಗೆ ಎಲ್ಲ ಐದು ಕಂಪನಿಗಳ ಗುತ್ತಿಗೆಗಳನ್ನು ಅಮಾನತಿನಲ್ಲಿ ಇಡಬೇಕು ಎಂದು ಕೇಂದ್ರ ಅರಣ್ಯ ಇಲಾಖೆ ಹಿರಿಯ ಸಹಾಯಕ ಐಜಿಪಿ ಬಿ.ಕೆ.ಸಿಂಗ್ ಬುಧವಾರ ಆಂಧ್ರಪ್ರದೇಶದ ಅರಣ್ಯ ಇಲಾಖೆಯ ಪ್ರಧಾನ ಕಾರ್ಯದರ್ಶಿಗೆ ಆದೇಶಿಸಿದ್ದಾರೆ.
ಆದೇಶ ಹೊರಡಿಸಿದ 15 ದಿನಗಳ ಒಳಗಾಗಿ ತಮಗೆ ಕಾರ್ಯಪಾಲನಾ ವರದಿ ನೀಡಬೇಕು. ಸರಿಯಾಗಿ ಗಡಿಯನ್ನು ಗುರುತಿಸದೇ ಗಣಿಗಾರಿಕೆಗೆ ಅವಕಾಶ ಮಾಡಿಕೊಟ್ಟ ಅಧಿಕಾರಿಗಳ ಮೇಲೆ ಕ್ರಮ ತೆಗೆದುಕೊಳ್ಳಬೇಕು ಎಂದು ಬಿ.ಕೆ.ಸಿಂಗ್ ತಿಳಿಸಿದ್ದಾರೆ. |