ಮುಖ್ಯಮಂತ್ರಿ ಯಡಿಯೂರಪ್ಪ ಅಥವಾ ಅವರ ಮಗ ರಾಘವೇಂದ್ರ ಜೊತೆ ಸಾರ್ವಜನಿಕವಾಗಿ ಚರ್ಚೆ ನಡೆಸಲು ಇಷ್ಟಪಡುವುದಿಲ್ಲ. ನಾನು ರಾಜ್ಯ ರಾಜಕಾರಣ ಮೀರಿ ಬೆಳೆದಿದ್ದೇನೆ. ನನ್ನದೇನಿದ್ದರೂ ಇಂಟರ್ನ್ಯಾಷನಲ್ ಲೇವಲ್. ಹೀಗೆಂದವರು ಮಾಜಿ ಮುಖ್ಯಮಂತ್ರಿ ಶಿವಮೊಗ್ಗ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಎಸ್. ಬಂಗಾರಪ್ಪ.
ನಗರದಲ್ಲಿ ನಡೆದ ಚುನಾವಣಾ ಪ್ರಚಾರ ಆಂದೋಳನದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಯಡಿಯೂಪ್ಪನವರು ಸವಾಲು ಹಾಕಿದರೆಂದು ಚರ್ಚೆಗೆ ಹೋದರೆ ನಾನು ಅಂತಾರಾಷ್ಟ್ರೀಯ ವಿಚಾರಗಳನ್ನು ಮಾತನಾಡುವಾಗ ಅವರು ಚಾಪೆ ಮೇಲೆ ಕುಳಿತು ಕೇಳಬೇಕಾಗುತ್ತದೆ ಇಂತಹ ಪರಿಸ್ಥಿತಿ ಅವರಿಗೆ ಬರುವುದು ಬೇಡ ಎಂದರು.
ಯಡಿಯೂರಪ್ಪ ಹಾಗೂ ರಾಘವೇಂದ್ರ ಅವರುಗಳು ಇನ್ನು ಪಂಚಾಯತ್ ಮಟ್ಟದ ಚರ್ಚೆಗಳಲ್ಲಿಯೇ ಇದ್ದಾರೆ. ಆದ್ದರಿಂದ ಅವರೊಂದಿಗೆ ತಾನೂ ಚರ್ಚೆ ನಡೆಸುವುದು ಸಾಧ್ಯವಿಲ್ಲ. ತನ್ನೊಂದಿಗೆ ಸಾರ್ವಜನಿಕವಾಗಿ ಚರ್ಚೆ ನಡೆಸುವ ಯೋಗ್ಯತೆ ಅವರಿಗಿಲ್ಲ ಎಂದು ವ್ಯಂಗ್ಯವಾಡಿದರು.
ದೇಶಾದ್ಯಂತ ಗಲಭೆಗೆ ಕಾರಣವಾದ ಸಂಘ ಪರಿವಾರದ ಮುಖ್ಯಸ್ಥರಾಗಿರುವ ಎಲ್.ಕೆ. ಅಡ್ವಾಣಿ ಅವರನ್ನು ಪ್ರಧಾನಿಯನ್ನಾಗಿ ಮಾಡುವುದು ಎಂದರೆ ದೇಶದ ಆಡಳಿತವನ್ನು ಸಂಘ ಪರಿವಾರದ ಕೈಗೆ ಒಪ್ಪಿಸಿದಂತೆ ಎಂಬುದನ್ನು ಮತದಾರರು ನೆನಪಿಟ್ಟುಕೊಳ್ಳಬೇಕೆಂದು ಅವರು ಇದೇ ಸಂದರ್ಭದಲ್ಲಿ ಕರೆ ನೀಡಿದರು. |