ಪ್ರಜಾಪ್ರಭುತ್ವದಲ್ಲಿ ಜನರೇ ನಿರ್ಣಾಯಕರು, ಸರ್ಕಾರವನ್ನು ರಚಿಸುವುದು, ಉರುಳಿಸುವುದು ಮತದಾರರ ಕೈಯಲ್ಲಿದೆಯೇ ಹೊರತು, ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಕೈಯಲ್ಲಿ ಇಲ್ಲ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಕಟುವಾಗಿ ತಿಳಿಸಿದ್ದಾರೆ.
ಮೈಸೂರಿನ ವಿವಿಧೆಡೆ ಬಿಜೆಪಿ ಅಭ್ಯರ್ಥಿಗಳ ಪರ ಪ್ರಚಾರ ಕಾರ್ಯದಲ್ಲಿ ಭಾಗವಹಿಸಲು ಆಗಮಿಸಿದ್ದ ಅವರು ಲಲಿತ್ ಮಹಲ್ ಹೆಲಿಪ್ಯಾಡ್ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದರು.
ಬಿಜೆಪಿಯೇ ನಮ್ಮ ಮೊದಲು ಶತ್ರು, ಬಿಜೆಪಿ ಸರ್ಕಾರವನ್ನು ಉರುಳಿಸುವುದಕ್ಕಾಗಿ ಯಾರ ಜೊತೆಯೂ ಕೈ ಜೋಡಿಸಲು ಸಿದ್ದ ಎಂದು ಕುಮಾರಸ್ವಾಮಿ ನೀಡಿದ್ದ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಅದರಲ್ಲಿ ವಿಶೇಷ ಏನಿದೆ,ಅವರು ಹೇಳಿರುವುದು ನೂರಕ್ಕೆ ನೂರು ಸತ್ಯ. ಬಿಜೆಪಿ ಶಕ್ತಿಯುತವಾಗಿ ಬೆಳೆದಿದೆ ಎನ್ನುವುದು ಅವರು ಪರೋಕ್ಷವಾಗಿ ಒಪ್ಪಿಕೊಂಡಿದ್ದಾರೆ.
ಹತ್ತು ತಿಂಗಳ ಆಡಳಿತದಲ್ಲಿ ಪ್ರಬಲವಾಗಿ ಬೆಳೆದಿರುವ ನಮ್ಮ ಪಕ್ಷವನ್ನು ಎದುರಿಸಲು ಇಬ್ಬರು ಒಂದಾಗೋಣ ಎನ್ನುವ ಸ್ವಾರ್ಥದ ಚಟ, ಕುರ್ಚಿ ಚಿಂತೆ ಹೊರತು, ರಾಜ್ಯದ ಅಭಿವೃದ್ಧಿ ಚಿಂತೆ ಇಲ್ಲ. ಕುಮಾರಸ್ವಾಮಿ ಅವರ ಹೇಳಿಕೆ ನಮಗೆ ಅನುಕೂಲ ಕಲ್ಪಿಸಲಿದ್ದು, ಅವರಿಗೆ ಅದು ತಿರುಗುಬಾಣವಾಗಲಿದೆ ಎಂದು ತಿರುಗೇಟು ನೀಡಿದ್ದಾರೆ. |