ಕನ್ನಡ ಚಿತ್ರರಂಗಕ್ಕೆ ನಟಸಾರ್ವಭೌಮ ಡಾ.ರಾಜ್ಕುಮಾರ್ ಒಬ್ಬರೇ ಸರ್ವೋಚ್ಚ ನಾಯಕರೇ ಹೊರತು, ಅಂಬರೀಷ್ ಅಲ್ಲ ಎಂದು ನವರಸ ನಾಯಕ ಜಗ್ಗೇಶ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.ಅಂಬರೀಷ್ ನನ್ನಂತೆ ಒಬ್ಬ ಕಲಾವಿದನೇ ಹೊರತು, ಅವರೇನು ಸರ್ವೋಚ್ಚ ನಾಯಕರಲ್ಲ. ಮಂಡ್ಯವನ್ನು ತಾಲಿಬಾನ್ ಮಾದರಿಯಾಗಿ ಪರಿವರ್ತಿಸಲು ಮುಂದಾಗಿ ತನ್ನ ವಿರುದ್ಧ ಚಿತ್ರ ತಾರೆಯರು ಪ್ರಚಾರ ನಡೆಸದಂತೆ ಅಂಬರೀಷ್ ಹೂಡಿರುವ ಷಡ್ಯಂತ್ರಕ್ಕೆ ಮಂಡ್ಯ ಮತದಾರರೇ ತಕ್ಕ ಉತ್ತರ ನೀಡಲಿದ್ದಾರೆ ಎಂದರು.ಮಂಡ್ಯದಲ್ಲಿ ತನ್ನ ವಿರುದ್ಧ ಚಿತ್ರನಟರು ಪ್ರಚಾರ ಕಾರ್ಯ ನಡೆಸಬಾರದು ಎಂದು ಅಂಬಿ ಹೊರಡಿಸಿರುವ ಫರ್ಮಾನು ವಿರುದ್ಧ ಭಾನುವಾರ ಮಡಿಕೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತ ಅಸಮಾಧಾನ ವ್ಯಕ್ತಪಡಿಸಿದರು. ಅಂಬರೀಷ್ ಹಾಗೂ ಕಾಂಗ್ರೆಸ್ನ ಡೋಂಗಿ ರಾಜಕಾರಣದ ಕುರಿತು ಮಂಡ್ಯ ಲೋಕಸಭಾ ಕ್ಷೇತ್ರದ ಮತದಾರರು ಚೆನ್ನಾಗಿ ಅರಿವು ಹೊಂದಿದ್ದಾರೆ. ಆ ನಿಟ್ಟಿನಲ್ಲಿ ರೆಬೆಲ್ ಸ್ಟಾರ್ ಹಣೆಪಟ್ಟಿಯ ಅಂಬಿಗೆ ಮತದಾರರ ತಕ್ಕ ಪಾಠ ಕಲಿಸಲಿದ್ದಾರೆ ಎಂದು ಕಿಡಿಕಾರಿದರು.ಚಿತ್ರರಂಗದಲ್ಲಿ ಅಂಬರೀಷ್ ನನಗಿಂತ ನಾಲ್ಕೈದು ವರ್ಷವಷ್ಟೇ ಹಿರಿಯರು. ಅಂಬಿ 150ಚಿತ್ರಗಳಲ್ಲಿ ನಟಿಸಿದ್ದರೆ, ನಾನು 120 ಸಿನಿಮಾಗಳಲ್ಲಿ ಅಭಿನಯಿಸಿದ್ದೇನೆ ಎಂದು ಜಗ್ಗೇಶ್ ಈ ಸಂದರ್ಭದಲ್ಲಿ ಹೇಳಿದರು. |