ಲೋಕಸಭೆ ಚುನಾವಣೆಯ ಹಿನ್ನೆಲೆಯಲ್ಲಿ ನೀತಿ ಸಂಹಿತೆ ಜಾರಿಯಲ್ಲಿದ್ದು, ಚುನಾವಣಾ ಆಯೋಗದ ಕಣ್ಣಿಗೆ ಮಣ್ಣೆರುಚುವಲ್ಲಿ ಎಲ್ಲಾ ರಾಜಕೀಯ ಪಕ್ಷಗಳು ಮುಂಚೂಯಣಿಲ್ಲಿದೆ. ಇದೀಗ ನೀತಿ ಸಂಹಿತೆಯ ಬಿಸಿ ಪುರೋಹಿತರಿಗೂ ತಟ್ಟಿದ್ದು, ಅರ್ಚಕರೊಬ್ಬರು ಪೊಲೀಸರ ಅತಿಥಿಯಾದ ಘಟನೆ ನಡೆದಿದೆ.
ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರ ಲೋಕಸಭಾ ಕ್ಷೇತ್ರವಾದ ಹೊಳೆನರಸೀಪುರದ ಶ್ರೀರಾಘವೇಂದ್ರ ಸ್ವಾಮಿ ಮಠದಲ್ಲಿ ಪುರಸಭೆಯ ಜೆಡಿಎಸ್ ಸದಸ್ಯ ಸುಬ್ಬರಾವ್ ರಾಯರ ಮಠದಲ್ಲಿ ಪೂಜೆ ಸಲ್ಲಿಸಿ ನೂರು ಜನರ ಪ್ರಸಾದಕ್ಕೆ ಒಂದು ಸಾವಿರ ರೂಪಾಯಿ ನೀಡಿದ್ದರು. ಮಧ್ನಾಹ್ನ ಮಾವಿನಕಾಯಿ ಚಿತ್ರಾನ್ನ ಮಾಡುವಂತೆಯೂ ಸೂಚನೆ ನೀಡಿದ್ದರು.
ಮಧ್ನಾಹ್ನ ಪ್ರಚಾರ ಮುಗಿಸಿದ ಜೆಡಿಎಸ್ ಕಾರ್ಯಕರ್ತರು ರಾಯರ ಮಠಕ್ಕೆ ಆಗಮಿಸಿ ಊಟಕ್ಕೆ ಕುಳಿತಿದ್ದರು. ಈ ಸಂದರ್ಭದಲ್ಲಿ ಕೆ.ಮರಿಯಪ್ಪ ಅವರು ಪೊಲೀಸರಿಗೆ ದೂರು ನೀಡಿದ್ದರು. ಕೂಡಲೇ ಸ್ಥಳಕ್ಕೆ ಪೊಲೀಸರು ಆಗಮಿಸಿದ್ದನ್ನು ಗಮನಿಸಿದ ಜೆಡಿಎಸ್ ಕಾರ್ಯಕರ್ತರು ಅಲ್ಲಿಂದ ಕಾಲ್ಕಿತ್ತಿದ್ದರು.
ಅಂತಿಮವಾಗಿ ಉಳಿದದ್ದು ಪೂಜೆ ಮಾಡಿದ ಅರ್ಚಕ ಪ್ರದೀಪ್(26) ಮತ್ತು ಅಡುಗೆ ಸಿದ್ದಪಡಿಸಿ ಬಡಿಸಿದ ರಮೇಶ್(46). ಕ್ಷೇತ್ರದ ದಂಡಾಧಿಕಾರಿ ರಾಜು ಅವರ ಆದೇಶದ ಮೇರೆಗೆ ಅರ್ಚಕ ಪ್ರದೀಪ್ ಹಾಗೂ ಬಾಣಸಿಗ ರಮೇಶ್, ಪುರಸಭೆ ಸದಸ್ಯ ಸುಬ್ಬರಾವ್ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿ, ಬಂಧಿಸಿದ್ದರು. ಬಳಿಕ ಅವರನ್ನು ನ್ಯಾಯಾಧೀಶರ ಮುಂದೆ ಹಾಜರುಪಡಿಸಿದ್ದು, ಜಾಮೀನಿನ ಮೇಲೆ ಬಿಡುಗಡೆಗೊಂಡಿದ್ದಾರೆ. |