ಕಾಂಗ್ರೆಸ್ ಕಳೆದ ಅರವತ್ತು ವರ್ಷಗಳಿಂದ ರಾಮರಾಜ್ಯದ ಜಪ ಮಾಡುತ್ತಲೇ ಜನರನ್ನು ಹಾದಿತಪ್ಪಿಸುವ ಕಾರ್ಯದಲ್ಲಿ ತೊಡಗಿದೆ. ಕಾಂಗ್ರೆಸಿಗರಿಂದ ರಾಮರಾಜ್ಯ ಕಟ್ಟಲು ಸಾಧ್ಯವಿಲ್ಲ, ಅವರೇನಿದ್ದರೂ ರೋಮ್ ರಾಜ್ಯ ಮಾತ್ರ ಕಟ್ಟುವವರು ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅನಂತ್ ಕುಮಾರ್ ಟೀಕಿಸಿದ್ದಾರೆ.
ಹಾವೇರಿ ಲೋಕಸಭೆ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಶಿವಕುಮಾರ್ ಉದಾಸಿ ಪರ ಗದಗ-ಬೆಟಗೇರಿಯಲ್ಲಿ ಪ್ರಚಾರ ನಡೆಸಿದ ಅನಂತ ಕುಮಾರ್ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ಹರಿಸಿದರು.
ರಾಷ್ಟ್ರೀಯ ಅಧ್ಯಕ್ಷೆ ಸೋನಿಯಾ ಗಾಂಧಿಯವರನ್ನೇ ಆಮದು ಕೊಂಡಿರುವುದು ಕಾಂಗ್ರೆಸ್ ಅಧೋಗತಿಗೆ ಇಳಿದಿರುವುದಕ್ಕೆ ಸಾಕ್ಷಿ. ಅದಕ್ಕಾಗಿ ಹಾವೇರಿಯಲ್ಲಿ ಸೂಕ್ತ ಅಭ್ಯರ್ಥಿ ಸಿಗದೆ ಮಂಗಳೂರಿನ ವ್ಯಕ್ತಿಯನ್ನು ಅಮದು ಮಾಡಿಕೊಂಡಿದ್ದಾರೆ ಎಂದು ಕುಹಕವಾಡಿದರು.
ಕಾಂಗ್ರೆಸ್ಸಿನಲ್ಲಿ ಎಲ್ಲವೂ ಅಯೋಮಯವಾಗಿದ್ದು, ಸಿದ್ದರಾಮಯ್ಯ ಅವರ ಪಾಡು ನೋಡಿ ಅಯ್ಯೋ ಅನಿಸುತ್ತಿದೆ. ದೇವೇಗೌಡರು ಕೈ ಕೊಟ್ಟರು. ಕೈ ಹಿಡಿದು ಕರೆದುಕೊಂಡು ಹೋಗಿದ್ದ ಕಾಂಗ್ರೆಸ್ ಕೂಡ ಕೈಕೊಟ್ಟಿತು ಎಂದರು. |