ಸಾಮಾಜಿಕ ಅನಿಷ್ಟ, ಜಾತಿಮುಕ್ತ ಸಮಾಜ ನಿರ್ಮಾಣಕ್ಕೆ ಬಸವೇಶ್ವರರ ತತ್ವ ಸಂದೇಶಗಳು ಪ್ರೇರಣೆಯಾಗಲಿವೆ ಎಂದು ರಾಜ್ಯಪಾಲ ರಾಮೇಶ್ವರ ಠಾಕೂರ್ರವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.ಬಸವೇಶ್ವರ ಅವರು ಅಸ್ಪ್ರಶ್ಯತೆ, ಸಾಮಾಜಿಕ ಅನಿಷ್ಟ, ಅನ್ಯಾಯ, ಜಾತಿ ವರ್ಗಿಕರಣ, ಧಾರ್ಮಿಕ ಶೋಷಣೆ ಮತ್ತಿತರ ಸಾಮಾಜಿಕ ಪಿಡುಗುಗಳ ಬಗ್ಗೆ ಅಂದೇ ಹೋರಾಟ ನಡೆಸಿದ್ದರು. ಈ ಅನಿಷ್ಟಗಳ ವಿರುದ್ಧ ಅವರು ಪ್ರತಿಪಾದಿಸಿದ ತತ್ವ ಸಂದೇಶಗಳನ್ನು ಪಾಲಿಸಿದ್ದಲ್ಲಿ ಉತ್ತಮ ಸಮಾಜ ನಿರ್ಮಾಣ ಸಾಧ್ಯ ಎಂದು ಅವರು ಹೇಳಿದರು.ಬಸವ ಸಮಿತಿ ಆಶ್ರಯದಲ್ಲಿ ನಡೆದ ಬಸವ ಜಯಂತಿ ಉತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಪ್ರೀತಿ, ಸಮಾನತೆ, ಸೇವೆ, ತತ್ವ ಸಂದೇಶಗಳನ್ನು ಪ್ರಸಕ್ತ ಕಾಲಕ್ಕೂ ಅನ್ವಯ ಅಗುವುದಲ್ಲದೇ ಭವಿಷ್ಯದಲ್ಲೂ ಈ ಸಂದೇಶಗಳು ಪ್ರೇರಕವಾಗಲಿದೆ ಎಂದರು.ಬಸವೇಶ್ವರರ ವಚನಗಳು ಕನ್ನಡ ಸಾಹಿತ್ಯದಲ್ಲಿ ಖಜಾನೆ ಇದ್ದಂತೆ, ಸರಳ ಭಾಷೆ ಸಾಮಾನ್ಯ ಜನರ ಹೃದಯಕ್ಕೂ ಮನಮುಟ್ಟುವಂತೆ ಹೇಳಲಾಗಿರುವ ವಚನಗಳು ಸರ್ವಕಾಲಕ್ಕೂ ಸಲ್ಲುವಂತದ್ದು ಎಂದು ತಿಳಿಸಿದರು. |