ರೆಡ್ಡಿ ಸಹೋದರರ ಅಕ್ರಮ ಗಣಿಗಾರಿಕೆ ಗುತ್ತಿಗೆಯನ್ನು ಕೇಂದ್ರ ಸರ್ಕಾರ ತಡೆ ಹಿಡಿದಿದ್ದರೂ ಕೂಡ, ಗಣಿಗಾರಿಕೆಯನ್ನು ನಿಲ್ಲಿಸುವುದಿಲ್ಲ ಎಂದು ಕಾನೂನಿಗೆ ಅಗೌರವ ತೋರಿರುವ ಓಬಳಾಪುರಂ ಮೈನ್ಸ್ ಮಾಲೀಕ, ಸಚಿವರಾದ ಜನಾರ್ದನ ರೆಡ್ಡಿ, ಕರುಣಾಕರ ರೆಡ್ಡಿ ಹಾಗೂ ಬಿ.ಶ್ರೀರಾಮುಲು ಅವರ ರಾಜೀನಾಮೆಯನ್ನು ಮುಖ್ಯಮಂತ್ರಿಗಳು ಪಡೆಯಬೇಕು ಎಂದು ಜನತಾದಳ(ಎಸ್) ಆಗ್ರಹಿಸಿದೆ.
ಸಚಿವರು ಸ್ವಯಂ ಪ್ರೇರಿತರಾಗಿ ರಾಜೀನಾಮೆ ನೀಡದಿದ್ದರೆ ಮುಖ್ಯಮಂತ್ರಿಗಳೇ ರಾಜೀನಾಮೆ ಪಡೆಯಬೇಕು ಇಲ್ಲವೇ ರಾಜ್ಯಪಾಲರೇ ಸೂಕ್ತ ಕ್ರಮ ಕೈಗೊಳ್ಳಬೇಕು. ಇಲ್ಲವಾದಲ್ಲಿ ಪಕ್ಷ ಕಾನೂನು ಹೋರಾಟಕ್ಕೂ ಸಿದ್ದವಿದೆ ಎಂದು ಜೆಡಿಎಸ್ನ ಪ್ರೊ.ರಾಧಾಕೃಷ್ಣ, ಪ್ರಧಾನ ಕಾರ್ಯದರ್ಶಿ ರಾಜೇಶ್ ಗುಂಡೂರಾವ್ ಹಾಗೂ ವಕ್ತಾರ ರಮೇಶ್ ಬಾಬು ಸುದ್ದಿಗೋಷ್ಠಿಯಲ್ಲಿ ಮಾತನಾಡುತ್ತ ತಿಳಿಸಿದರು.
ಅಕ್ರಮ ಗಣಿಗಾರಿಕೆಯನ್ನು ನಿಲ್ಲಿಸಬೇಕು ಎಂದು ಕರ್ನಾಟಕ ನೆಲ ಸಂರಕ್ಷಣಾ ಸಮಿತಿಯು ರಾಜ್ಯಪಾಲರ ಮೂಲಕ ರಾಷ್ಟ್ರಪತಿಗಳಿಗೆ ಇತ್ತೀಚೆಗೆ ಮನವಿ ಸಲ್ಲಿಸಿತ್ತು. ಇದರ ಫಲವಾಗಿ ಓಬಳಾಪುರಂ ಕಂಪೆನಿಗೂ ಕೇಂದ್ರ ಸರ್ಕಾರ ಗಣಿಗಾರಿಕೆಗೆ ತಡೆ ನೀಡಿತ್ತು.
ಇದಕ್ಕೆ ಪ್ರತಿಯಾಗಿ ಜನಾರ್ದನ ರೆಡ್ಡಿ ಅವರು ಯಾವುದೇ ಕಾರಣಕ್ಕೂ ಗಣಿಗಾರಿಕೆಯನ್ನು ನಿಲ್ಲಿಸುವುದಿಲ್ಲ ಎಂದು ಸೋಮವಾರ ತಿಳಿಸಿದ್ದರು. ಅಧಿಕಾರದ ದರ್ಪದಿಂದ ಆಡಿರುವ ಮಾತಿನಲ್ಲಿ ಉದ್ದಟತನವೂ ತುಂಬಿದೆ ಎಂದು ರಾಧಾಕೃಷ್ಣ ಹೇಳಿದರು. ಗಡಿ ಕಲ್ಲನ್ನು ಕಿತ್ತಿರುವ ಸಚಿವರು ಕನ್ನಡದ ನೆಲವನ್ನು ಆಂಧ್ರಪ್ರದೇಶವನ್ನಾಗಿ ಪರಿವರ್ತಿಸಿ, ಕರ್ನಾಟಕದ ಸೌರ್ವಭೌಮತೆಗೆ ಧಕ್ಕೆ ತಂದಿದ್ದಾರೆ ಎಂದು ಟೀಕಿಸಿದರು. |