ಚುನಾವಣೆಯಲ್ಲಿ ಮತಕ್ಕಾಗಿ ಮುಖ್ಯಮಂತ್ರಿ ಕಚೇರಿಯ ಅಧಿಕಾರಿಯೊಬ್ಬರು ಸಭೆ ನಡೆಸಿ ರಾಜಕೀಯ ಪಕ್ಷವೊಂದರ ಪರವಾಗಿ ಹಣ ಹಂಚಿದ್ದು ಪ್ರಜಾಪ್ರಭುತ್ವದ ದುರಾದೃಷ್ಟ ಎಂದು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ದೂರಿದ್ದಾರೆ.
ಚಿಕ್ಕಮಗಳೂರಿನಲ್ಲಿ ಬಿಜೆಪಿ ಲೋಕಸಭಾ ಅಭ್ಯರ್ಥಿ ಸದಾನಂದ ಗೌಡರಿಗೆ ಸೇರಿದ್ದೆನ್ನಲಾದ ಮನೆಯಲ್ಲಿ ಸಿಎಂ ಕಚೇರಿಯ ಮುಖ್ಯ ಅಧಿಕಾರಿ ನಂದಕುಮಾರ್ ಅವರು ಭಾನುವಾರ ಸರ್ಕಾರಿ ವಾಹನದಲ್ಲಿ ತೆರಳಿ, ಹಣ ಹಂಚಿರುವುದಾಗಿ ವಿರೋಧ ಪಕ್ಷಗಳು ಕಟುವಾಗಿ ಟೀಕಿಸಿ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದವು.
ರಾಜ್ಯದ ಜವಾಬ್ದಾರಿ ನಿರ್ವಹಿಸುವ ಮುಖ್ಯಮಂತ್ರಿ ಯಡಿಯೂರಪ್ಪ ಅವರ ಕಾರ್ಯವೈಖರಿ ಆಘಾತ ತಂದಿದೆ. ಇದು ಪ್ರಜಾಪ್ರಭುತ್ವ ವ್ಯವಸ್ಥೆಗೆ ಕಳಂಕ ಎಂದು ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡುತ್ತ ತಿಳಿಸಿದರು.
ಬಿಜೆಪಿಯ ಪ್ರಧಾನಿ ಅಭ್ಯರ್ಥಿ ಎಂದು ಬಿಂಬಿತವಾಗಿರುವ ಎಲ್.ಕೆ.ಆಡ್ವಾಣಿ ಅವರು ಇಂಥ ಘಟನೆಗಳಿಗೆ ಅವಕಾಶ ನೀಡದಂತೆ ಎಚ್ಚರವಹಿಸಬೇಕಿತ್ತು ಎಂದು ಹೇಳಿದರು.
ಗೌಡರ ವಿರುದ್ದ ದೂರು: ಹಾಸನ ಲೋಕಸಭಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿಯಾಗಿರುವ ದೇವೇಗೌಡರು ಚುನಾವಣಾ ಪ್ರಚಾರ ಸಂದರ್ಭದಲ್ಲಿ ಮತದಾರರಿಗೆ ಹಣ ಹಂಚುವ ಮೂಲಕ ಚುನಾವಣಾ ನೀತಿ ಸಂಹಿತೆ ಉಲ್ಲಂಘಿಸಿದ್ದಾರೆ ಎಂದು ಬಿಜೆಪಿ ಚುನಾವಣಾ ಆಯೋಗಕ್ಕೆ ದೂರು ನೀಡಿದೆ.
ಹಾಸನದಲ್ಲಿ ದೇವೇಗೌಡರು ರೋಡ್ ಶೋ ನಡೆಸಿದ ಸಂದರ್ಭದಲ್ಲಿ ಆರತಿ ತಟ್ಟೆಗೆ ಸಾವಿರು ರೂಪಾಯಿಯ ನೋಟುಗಳನ್ನು ಹಾಕುವ ಮೂಲಕ ಚುನಾವಣಾ ನೀತಿ ಸಂಹಿತೆಯನ್ನು ಉಲ್ಲಂಘಿಸಿದ್ದಾರೆ. ಆ ನಿಟ್ಟಿನಲ್ಲಿ ಚುನಾವಣಾ ಆಯೋಗ ದೇವೇಗೌಡರನ್ನು ಸ್ಪರ್ಧೆಯಿಂದ ಅನರ್ಹಗೊಳಿಸಬೇಕೆಂದು ಬಿಜೆಪಿ ಮುಖಂಡರಾದ ರಾಜಶೇಖರ್, ಶಿವಕುಮಾರ್ ಸೋಮವಾರ ರಾಜ್ಯ ಚುನಾವಣಾಧಿಕಾರಿ ವಿದ್ಯಾಶಂಕರ್ ಅವರಿಗೆ ದೂರು ಸಲ್ಲಿಸಿದ್ದರು. |