ಚುನಾವಣಾ ಪ್ರಚಾರದಲ್ಲಿ ಪಾಲ್ಗೊಂಡ ಆರೋಪದ ಮೇಲೆ ಮುಖ್ಯಮಂತ್ರಿಗಳ ಜಂಟಿ ಕಾರ್ಯದರ್ಶಿ ನಂದಕುಮಾರ್ ಅವರನ್ನು ಬಂಧಿಸಿರುವ ಚಿಕ್ಕಮಗಳೂರು ಗ್ರಾಮಾಂತರ ಪೊಲೀಸರು ಜಾಮೀನಿನ ಮೇಲೆ ಬಿಡುಗಡೆ ಮಾಡಿದ್ದಾರೆ.
ನಂದಕುಮಾರ್ ವಿರುದ್ಧ ಜನಪ್ರತಿನಿಧಿ ಕಾಯ್ದೆ ಕಲಂ 129 ಮತ್ತು ಭಾರತೀಯ ದಂಡ ಸಂಹಿತೆ 171 (ಬಿ) ಮತ್ತು (ಸಿ) ಕಲಂ ಅನ್ವಯ ಒಟ್ಟು ಮೂರು ಕೇಸುಗಳನ್ನು ದಾಖಲು ಮಾಡಲಾಗಿದೆ. ಈ ನಡುವೆ ನಂದಕುಮಾರ್ ಪ್ರಕರಣದ ವಿಚಾರಣೆಗೆ ಕೇಂದ್ರ ಚುನಾವಣಾ ಆಯುಕ್ತ ಖುರೇಷಿ ಬೆಂಗಳೂರಿಗೆ ಆಗಮಿಸಲಿದ್ದಾರೆ.
ಯಾವುದೇ ಸರ್ಕಾರಿ ಅಧಿಕಾರಿ ರಾಜಕೀಯ ಪಕ್ಷವೊಂದರ ಚುನಾವಣಾ ಪ್ರಚಾರದಲ್ಲಿ ಪಾಲ್ಗೊಳ್ಳುವುದು ನಿಯಮದ ಉಲ್ಲಂಘನೆ ಹಾಗೂ ಅಪರಾಧ. ನಂದಕುಮಾರ್ ವಿರುದ್ಧ ಪ್ರಕರಣವನ್ನು ದಾಖಲಿಸಲಾಗಿದ್ದು, ವರದಿಯನ್ನು ಕೇಂದ್ರ ಚುನಾವಣಾ ಆಯೋಗದ ಅಧಿಕಾರಿಗಳಿಗೆ ರವಾನಿಸಲಾಗಿದೆ ಎಂದು ರಾಜ್ಯ ಮುಖ್ಯ ಚುನಾವಣಾಧಿಕಾರಿ ವಿದ್ಯಾಶಂಕರ್ ತಿಳಿಸಿದ್ದಾರೆ. ಒಂದು ವೇಳೆ ಹಿರಿಯ ಐಎಎಸ್ ಅಧಿಕಾರಿ ನಂದಕುಮಾರ್ ಅವರ ಮೇಲಿನ ಚುನಾವಣಾ ಪ್ರಚಾರದಲ್ಲಿ ಪಾಲ್ಗೊಂಡ ಆರೋಪದ ಸಾಬೀತಾದರೆ ಎರಡುವರೆ ವರ್ಷ ಜೈಲು ಶಿಕ್ಷೆಯಾಗಲಿದೆ.
ಈ ಮಧ್ಯೆ, ನಂದಕುಮಾರ್ ಚುನಾವಣಾ ಪ್ರಚಾರದಲ್ಲಿ ಪಾಲ್ಗೊಂಡಿದ್ದರು ಎಂಬುದರಲ್ಲಿ ಸತ್ಯಾಂಶವಿಲ್ಲ. ನಂದಕುಮಾರ್ ಸಂಬಂಧಿಕರ ಮನೆಗೆ ಹೋಗಿರಬಹುದು, ಅದಕ್ಕೂ ಅನುಮತಿ ಪಡೆದು ಹೋಗಿದ್ದರು ಎಂಬ ಮಾಹಿತಿ ನನಗಿದೆ. ಈ ವಿಷಯದಲ್ಲಿ ಮಧ್ಯ ಪ್ರವೇಶಿಸುವುದಿಲ್ಲ. ತನಿಖೆ ನಡೆಸಲಿ, ಆರೋಪ ಸಾಬೀತಾದರೆ ಕ್ರಮ ಕೈಗೊಳ್ಳಲಿ ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಹೇಳಿದ್ದಾರೆ. |