ಬಸವವೇದಿಕೆ ವರ್ಷಂಪ್ರತಿ ನೀಡುವ ಬಸವಶ್ರೀ ಮತ್ತು ವಚನ ಸಾಹಿತ್ಯಶ್ರೀ ಪ್ರಶಸ್ತಿಯನ್ನು ಈ ಬಾರಿ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ವೀರೇಂದ್ರ ಹೆಗ್ಗಡೆ ಹಾಗೂ ಖ್ಯಾತ ಹಿಂದೂಸ್ತಾನಿ ಗಾಯಕ ಧಾರವಾಡ ಪ್ರೊ.ಎಂ.ವೆಂಕಟೇಶ್ ಕುಮಾರ್ ಅವರಿಗೆ ಲಭಿಸಿದೆ.ಮೇ 1ರಂದು ರವೀಂದ್ರ ಕಲಾಕ್ಷೇತ್ರದಲ್ಲಿ ಬೆಳಿಗ್ಗೆ 11ಗಂಟೆಗೆ ನಡೆಯಲಿರುವ ಬಸವಜಯಂತಿ ಸಮಾರಂಭದಲ್ಲಿ ಸುತ್ತೂರು ಮಠದ ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಮತ್ತು ಬೆಂಗಳೂರು ವಿ.ವಿ.ಕುಲಪತಿ ಡಾ.ಎನ್.ಪ್ರಭುದೇವ್ ಅವರು ಪ್ರಶಸ್ತಿ ಪ್ರಧಾನ ಮಾಡಲಿದ್ದಾರೆಂದು ವೇದಿಕೆಯ ಕೋಶಾಧ್ಯಕ್ಷ ಎಂ.ರುದ್ರಯ್ಯ ಸುದ್ದಿಗಾರರೊಂದಿಗೆ ಮಾತನಾಡುತ್ತ ತಿಳಿಸಿದ್ದಾರೆ.ಡಾ.ವೀರೇಂದ್ರ ಹೆಗ್ಗಡೆಯವರು ಅಖಿಲ ಭಾರತ ಮಟ್ಟದಲ್ಲಿ ಸಾಹಿತ್ಯ ಸಮ್ಮೇಳನಗಳನ್ನು ನಡೆಸುವುದರೊಂದಿಗೆ 11 ಸಾವಿರಕ್ಕೂ ಹೆಚ್ಚು ಜೋಡಿಗಳಿಗೆ ಸರಳ ಸಾಮೂಹಿಕ ವಿವಾಹದ ಮುಖೇನ ದಾಂಪತ್ಯ ಜೀವನಕ್ಕೆ ಕಾರಣರಾಗಿದ್ದಾರೆ. ಹಾಗೆಯೇ ಪ್ರೊ.ಎಂ.ವೆಂಕಟೇಶ್ ಅವರು ತಮ್ಮ ಹಾಡುಗಾರಿಕೆಯಿಂದ ನಾಡಿನಾದ್ಯಂತ ವಚನ ಹಾಗೂ ದಾಸ ಪದಗಳನ್ನು ಹಾಡಿ ಜನರನ್ನು ಬಸವ ತತ್ವಗಳನ್ನು ಪರಿಚಯಿಸಿರುವ ಕಾರಣದಿಂದಾಗಿ ಈ ಇಬ್ಬರಿಗೆ ಈ ವರ್ಷದ ಬಸವಶ್ರೀ ಮತ್ತು ವಚನ ಸಾಹಿತ್ಯಶ್ರೀ ಪ್ರಶಸ್ತಿ ನೀಡಲು ನಿರ್ಧರಿಸಿರುವುದಾಗಿ ಬಸವವೇದಿಕೆ ತಿಳಿಸಿದೆ. |