ಪ್ರವಾಸೋದ್ಯಮ ಸಚಿವ ಜನಾರ್ದನ ರೆಡ್ಡಿಯವರಿಗೆ ದೇವರು ಒಳ್ಳೆಯ ಬುದ್ದಿ ಕೊಡಲಿ. ಅವರು ಸುಳ್ಳು ಹೇಳುವುದನ್ನು ಬಿಟ್ಟು ನಿಜ ಹೇಳಲಿ. ನಾನು, ಕುಮಾರಸ್ವಾಮಿ ಮತ್ತು ಎಂ.ಪಿ.ಪ್ರಕಾಶ್ 150ಕೋಟಿ ರೂ.ಲಂಚ ಪಡೆದಿದ್ದೇವೆ ಎಂಬುದನ್ನು ಎದೆ ಮುಟ್ಟಿ ಹೇಳಲಿ ಎಂದು ಬಿಜೆಪಿ ಮುಖಂಡ, ಮಾಜಿ ಸಚಿವ ಸಿ.ಚನ್ನಿಗಪ್ಪ ಅವರು ತಿಳಿಸಿದ್ದಾರೆ.
ದೈನಿಕವೊಂದರ ಜತೆ ಮಾತನಾಡಿದ ಅವರು, ರೆಡ್ಡಿ ಇತ್ತೀಚೆಗೆ 150ಕೋಟಿ ರೂ.ಗಣಿ ಲಂಚ ಪ್ರಕರಣದಲ್ಲಿ ತಮ್ಮ ಹೆಸರು ಪ್ರಸ್ತಾಪಿಸಿರುವುದಕ್ಕೆ ತೀವ್ರ ಬೇಸರ ವ್ಯಕ್ತಪಡಿಸಿದರು.
ನನಗೆ ರೆಡ್ಡಿ ಮುಖ್ಯ ಅಲ್ಲ, ರೆಡ್ಡಿ ಹೇಳಿದ್ದಕ್ಕೆಲ್ಲಾ ಹೌದು ಎನ್ನುವ ಪರಿಸ್ಥಿತಿ ನನಗೆ ಬಂದಿಲ್ಲ. ರಾಜ್ಯದಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಉತ್ತಮ ಆಡಳಿತ ನೀಡುತ್ತಿದ್ದಾರೆ. 150ಕೋಟಿ ರೂ.ಲಂಚ ಪ್ರಕರಣ ನ್ಯಾಯಾಲಯದಲ್ಲಿ, ಆ ನಿಟ್ಟಿನಲ್ಲಿ ನಾನು ರೆಡ್ಡಿಗೆ ಉತ್ತರ ಹೇಳಬೇಕಾದ ಅಗತ್ಯವಿಲ್ಲ. ನ್ಯಾಯಾಲಯ ನೀಡುವ ತೀರ್ಪಿಗೆ ತಲೆಬಾಗುತ್ತೇನೆ ಎಂದರು.
ರೆಡ್ಡಿ ನನಗೆ 150ಕೋಟಿ ನೀಡಿದ್ದೇನೆ ಎಂದು ಹೇಳುವ ರೆಡ್ಡಿ, ಎಲ್ಲಿಯಾದರೂ ಕೋಟಿಗಳನ್ನು ಕೊಳ್ಳೆ ಹೊಡೆದು ಇಟ್ಟಿದ್ದರೇ ಎಂದೂ ಈ ಸಂದರ್ಭದಲ್ಲಿ ತರಾಟೆಗೆ ತೆಗೆದುಕೊಂಡರು. |