ನೈಸ್ ರಸ್ತೆ ನಿರ್ಮಾಣಕ್ಕೆ ಸಂಬಂಧಿಸಿದಂತೆ ಭೂಮಿಯನ್ನು ವಶಪಡಿಸಿಕೊಳ್ಳುವ ನಿಟ್ಟಿನಲ್ಲಿ ಗ್ರಾಮಸ್ಥರಿಗೆ ನೋಟಿಸ್ ನೀಡಲು ತೆರಳಿದ ನಾಲ್ವರು ಕೆಎಐಡಿಬಿ ಅಧಿಕಾರಿಗಳನ್ನು ಚೆನ್ನಾಗಿ ಥಳಿಸಿದ ಘಟನೆ ಬುಧವಾರ ಕೆಂಗೇರಿಯ ಗೋಣಿಪುರದಲ್ಲಿ ನಡೆದಿದೆ.
ನೈಸ್ ರಸ್ತೆಗಾಗಿ ಭೂಮಿಯನ್ನು ವಶಪಡಿಸಿಕೊಳ್ಳಲು ಅಂತಿಮ ಹಂತದ ನೋಟಿಸ್ ನೀಡಲು ನಾಲ್ವರು ಅಧಿಕಾರಿಗಳು ಕೆಂಗೇರಿಯ ಗೋಣಿಪುರಕ್ಕೆ ನಾಲ್ವರು ಅಧಿಕಾರಿಗಳು ತೆರಳಿದ್ದ ಸಂದರ್ಭದಲ್ಲಿ ಅಕ್ರೋಶಗೊಂಡ ಗ್ರಾಮಸ್ಥರು ಅವರನ್ನು ಚೆನ್ನಾಗಿ ಥಳಿಸಿ ಗೋಡೌನ್ವೊಂದರಲ್ಲಿ ಕೂಡಿ ಹಾಕಿದ್ದಾರೆ.
ನೈಸ್ ರಸ್ತೆಗಾಗಿ 1916ಎಕರೆ ಭೂಮಿ ವಶಪಡಿಸಿಕೊಳ್ಳಲು ನಿರ್ಧರಿಸಿದ್ದು, ಇದರಿಂದಾಗಿ ಸುಮಾರು 5 ಗ್ರಾಮಗಳಲ್ಲಿನ ರೈತರು ಭೂಮಿಯನ್ನು ಕಳೆದುಕೊಳ್ಳಲಿದ್ದಾರೆ. ಕೃಷಿಯನ್ನೇ ನಂಬಿಕೊಂಡಿರುವುದರಿಂದ ತಾವು ಯಾವುದೇ ಕಾರಣಕ್ಕೂ ಜಮೀನನ್ನು ವಶಪಡಿಸಿಕೊಳ್ಳಲು ಅವಕಾಶ ನೀಡಲಾರೆವು ಎಂದು ಗ್ರಾಮಸ್ಥರು ಪಟ್ಟು ಹಿಡಿದಿದ್ದಾರೆ.
ಈ ನಿಟ್ಟಿನಲ್ಲಿ ನೋಟಿಸ್ ನೀಡಲು ಬಂದಿರುವ ಅಧಿಕಾರಿಗಳನ್ನು ಕೋಣೆಯೊಂದರಲ್ಲಿ ಕೂಡಿ ಹಾಕಿದ್ದು, ಸ್ಥಳಕ್ಕೆ ಪೊಲೀಸರು ಆಗಮಿಸಿದ್ದರೂ ಕೂಡ ಸಮಸ್ಯೆ ಇತ್ಯರ್ಥ ಜಟಿಲವಾಗಿದ್ದು, ಸ್ವತಃ ಜಿಲ್ಲಾಧಿಕಾರಿಯವರೇ ಗ್ರಾಮಕ್ಕೆ ಆಗಮಿಸಿ, ನೈಸ್ಗಾಗಿ ಭೂಮಿಯನ್ನು ವಶಪಡಿಸಿಕೊಳ್ಳುವುದಿಲ್ಲ ಎಂಬ ಭರವಸೆ ನೀಡುವವರೆಗೆ ಅಧಿಕಾರಿಗಳನ್ನು ಬಿಡುವುದಿಲ್ಲ ಎಂಬುದಾಗಿ ಪಟ್ಟು ಹಿಡಿದಿದ್ದಾರೆ. |