'ನಾನು ಏನೆಂಬುದನ್ನು ಜಗ್ಗೇಶ್ ಅವರು ಹೆಂಡತಿ, ಮಕ್ಕಳನ್ನು ಕೇಳಿ ತಿಳಿದುಕೊಳ್ಳಲಿ ಎಂದು ಮಂಡ್ಯ ಲೋಕಸಭಾ ಕಾಂಗ್ರೆಸ್ ಅಭ್ಯರ್ಥಿ ಅಂಬರೀಷ್ ತಿರುಗೇಟು ನೀಡಿದ್ದಾರೆ.
ಬಿಜೆಪಿ ಮುಖಂಡ ಜಗ್ಗೇಶ್ ತನ್ನ ಬಗ್ಗೆ ನೀಡಿರುವ ಹೇಳಿಕೆಗಳು ಬಾಲಿಶವಾಗಿದೆ. ನಾನು ಏನಾಗಿದ್ದೇನೆ, ನನ್ನ ನಡವಳಿಕೆಗಳು ಹೇಗಿವೆ ಎಂಬುದು ಎಲ್ಲರಿಗೂ ತಿಳಿದಿದೆ. ಅಷ್ಟೇ ಏಕೆ ನನ್ನ ಬಗ್ಗೆ ಜಗ್ಗೇಶ್ ಹೆಂಡತಿ, ಮಕ್ಕಳನ್ನೇ ಕೇಳಿ ತಿಳಿದುಕೊಳ್ಳಲಿ ಎಂದು ಅಂಬಿ ಶ್ರೀರಂಗಪಟ್ಟಣದಲ್ಲಿ ನಡೆದ ಶೋ ಕಾರ್ಯಕ್ರಮದ ನಂತರ ಸುದ್ದಿಗಾರರೊಂದಿಗೆ ಮಾತನಾಡುತ್ತ ತಿಳಿಸಿದರು.
ಕಲಾವಿದರಿಗೆ ಬೆದರಿಕೆ ಹಾಕುವಷ್ಟು ಮುಟ್ಠಾಳ ನಾನಲ್ಲ, ಯಾವುದೇ ಒಬ್ಬ ಕಲಾವಿದನನ್ನು ಕರೆದು ಈ ಬಗ್ಗೆ ವಿಚಾರಿಸಲಿ ಎಂದ ಅವರು, ಜಗ್ಗೇಶ್ ಏನೆಲ್ಲ ಮಾತನಾಡಿದ್ದಾರೆ. ಅವರು ತುಂಬಾ ದೊಡ್ಡ ಮನುಷ್ಯ, ಹಣಕ್ಕಾಗಿ ವ್ಯಕ್ತಿತ್ವ ಮಾರಿಕೊಂಡವರ ಬಗ್ಗೆ ಹೆಚ್ಚು ಮಾತನಾಡುವ ಅಗತ್ಯವಿಲ್ಲ ಎಂದು ಈ ಸಂದರ್ಭದಲ್ಲಿ ಹೇಳಿದರು.
ಕನ್ನಡ ಚಿತ್ರರಂಗಕ್ಕೆ ನಟ ಅಂಬರೀಷ್ ಸೌರ್ವಭೌಮರಲ್ಲ, ಕನ್ನಡಕ್ಕೆ ಡಾ.ರಾಜ್ ಕುಮಾರ್ ಅವರೇ ನಾಯಕರು, ಮಂಡ್ಯ ಕ್ಷೇತ್ರದಲ್ಲಿ ಕಲಾವಿದರು ಬಂದು ಮತ ಪ್ರಚಾರ ನಡೆಸಬಾರದು ಎಂದು ಅಂಬಿ ಫರ್ಮಾನು ಹೊರಡಿಸಲು ಮಂಡ್ಯ ಕ್ಷೇತ್ರವೇನೂ ತಾಲಿಬಾನ್ನಲ್ಲಿಲ್ಲ ಎಂದು ಜಗ್ಗೇಶ್ ಇತ್ತೀಚೆಗೆ ಕಟುವಾಗಿ ಟೀಕಿಸಿದ್ದರು. |