ಮಂಗಳೂರು ನ್ಯಾಯವಾದಿ ನೌಷಾದ್ ಕಾಸಿಂ ಅವರ ಹತ್ಯೆ ಪ್ರಕರಣ ಹೈಕೋರ್ಟ್ ಮೆಟ್ಟಿಲೇರಿದ್ದು, ನ್ಯಾಯಾಲಯ ಸರ್ಕಾರಕ್ಕೆ ನೋಟಿಸ್ ಜಾರಿ ಮಾಡಿದೆ.ನೌಷಾದ್ ಕೊಲೆ ಪ್ರಕರಣದಲ್ಲಿ ಆರೋಪಿಗಳಾಗಿರುವ ಪೊಲೀಸರೇ ತನಿಖೆ ನಡೆಸುತ್ತಿರುವುದಾಗಿ ಆರೋಪಿಸಿ ಮುಖ್ಯನ್ಯಾಯಮೂರ್ತಿ ಪಿ.ಡಿ.ದಿನಕರನ್ ಅವರಿಗೆ 'ಸಿಕ್ರಂ' ಎಂಬ ಸಂಘಟನೆ ಪತ್ರ ಬರೆದಿದೆ. ಪತ್ರವನ್ನು ನ್ಯಾಯಮೂರ್ತಿಗಳಾದ ಡಿ.ವಿ.ಶೈಲೇಂದ್ರ ಕುಮಾರ್ ಹಾಗೂ ಜಾವೇದ್ ರಹೀಂ ಅವರನ್ನು ಒಳಗೊಂಡ ರಜಾಕಾಲದ ವಿಭಾಗೀಯ ಪೀಠ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಎಂದು ಪರಿಗಣಿಸಿ, ಸರ್ಕಾರ ಹಾಗೂ ಪ್ರತಿವಾದಿ ಪೊಲೀಸ್ ಅಧಿಗಳಾಗಿರುವ ಬೆಂಗಳೂರಿನ ಜಯಂತ ಶೆಟ್ಟಿ, ವೆಂಕಟೇಶ್ ಪ್ರಸನ್ನ, ಎಂ.ಶಿವಪ್ರಕಾಶ್, ಉಡುಪಿಯ ವೇಲೆಂಟಿನ್ ಡಿಸೋಜಾ ಅವರಿಗೆ ನೋಟಿಸ್ ಜಾರಿಗೆ ಆದೇಶಿಸಿದೆ.ಏಪ್ರಿಲ್ 21ರಂದು ಮುಖ್ಯನ್ಯಾಯಮೂರ್ತಿಗಳಿಗೆ ಪತ್ರ ಬರೆದಿರುವ ಸಂಘಟನೆ, ನೌಷಾದ್ ಅವರು, ಕ್ರಿಮಿನಲ್ ಪ್ರಕರಣಗಳಲ್ಲಿ ಬಲವಾಗಿ ವಾದ ಮಂಡಿಸುತ್ತಿದ್ದ ಕಾರಣ ಪೊಲೀಸರಿಗೆ ನುಂಗಲಾರದ ಬಿಸಿ ತುಪ್ಪವಾಗಿತ್ತು. ಅಲ್ಲದೇ ನೌಶಾದ್ ಅವರು, ಬಿಜೆಪಿ ಮುಖಂಡ ಸುಖಾನಂದ ಅವರ ಕೊಲೆ ಪ್ರಕರಣದಲ್ಲಿ ಹಾಗೂ ಉಡುಪಿ ಶಾಸಕ ರಘುಪತಿ ಭಟ್ ಅವರ ಪತ್ನಿ ಪದ್ಮಪ್ರಿಯಾ ಕೊಲೆ ಪ್ರಕರಣದ ಪ್ರಮುಖ ಆರೋಪಿ ಅತುಲ್ ರಾವ್ ಅವರ ಪರವಾಗಿ ವಾದ ಮಂಡಿಸುತ್ತಿದ್ದರು. ಇದು ಸಂಘ ಪರಿವಾರಕ್ಕೆ ದೊಡ್ಡ ತಲೆನೋವಾಗಿ ಪರಿಣಮಿಸಿತ್ತು. |