ಕಾಂಗ್ರೆಸ್ ಅಭ್ಯರ್ಥಿಯನ್ನು ಬೆಂಬಲಿಸಿದ ವಿಷಯದಲ್ಲಿ ದಾವಣಗೆರೆಯ ಹರಿಹರದಲ್ಲಿ ಬಿಜೆಪಿ ಮತ್ತು ಜೆಡಿಎಸ್ ಕಾರ್ಯಕರ್ತರ ನಡುವೆ ನಡೆದ ಮಾರಾಮಾರಿಯಲ್ಲಿ ಜೆಡಿಎಸ್ ಮುಖಂಡ ಕೊಂಡಜ್ಜಿ ಸಾವನ್ನಪ್ಪಿರುವ ಘಟನೆಗೆ ಸಂಬಂಧಿಸಿದಂತೆ ಆರೋಪಿ ಜೀವನ್ ಮಾನೆಯನ್ನು ಧಾರವಾಡದಲ್ಲಿ ಬಂಧಿಸಿರುವುದಾಗಿ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಘಟನೆಯ ಪ್ರಮುಖ ಆರೋಪಿಯಾಗಿರುವ ಮಾನೆ ಧಾರವಾಡದ ಸಂಬಂಧಿಕರ ಮನೆಯಲ್ಲಿ ಅಡಗಿ ಕುಳಿತಿರುವ ಖಚಿತ ಮಾಹಿತಿ ಮೇರೆಗೆ ಪೊಲೀಸರು ದಾಳಿ ನಡೆಸಿ ಆರೋಪಿಯನ್ನು ಬಂಧಿಸಿದ್ದು, ವಿಚಾರಣೆ ನಡೆಸುತ್ತಿರುವುದಾಗಿ ಹೇಳಿದ್ದಾರೆ.
ಗುರುವಾರ ದಾವಣಗೆರೆಯ ಹರಿಹರದಲ್ಲಿ ಜೆಡಿಎಸ್ ಮುಖಂಡ ವಿಜಯ್ ಕುಮಾರ್ ಕೊಂಡಜ್ಜಿ ಎಂಬವರು ಕಾಂಗ್ರೆಸ್ ಅಭ್ಯರ್ಥಿಯನ್ನು ಬೆಂಬಲಿಸಿದ ಹಿನ್ನೆಲೆಯಲ್ಲಿ ಬಿಜೆಪಿ ಮತ್ತು ಜೆಡಿಎಸ್ ಕಾರ್ಯಕರ್ತರ ನಡುವೆ ಹೊಯ್ ಕೈ ನಡೆದ ಸಂದರ್ಭದಲ್ಲಿ ಕೊಂಡಜ್ಜಿ ಅವರಿಗೆ ತೀವ್ರವಾದ ಹೊಡೆತ ಬಿದ್ದಿತ್ತು. ಕೂಡಲೇ ಅವರನ್ನು ಸ್ಥಳೀಯ ಆಸ್ಪತ್ರೆಗೆ ಸಾಗಿಸಲಾಯಿತಾದರೂ ದಾರಿ ಮಧ್ಯೆಯೇ ಕೊನೆಯುಸಿರೆಳೆದಿದ್ದರು.
ಕೊಂಡಜ್ಜಿ ಹರಿಹರದ ಜೆಡಿಎಸ್ ಮುಖಂಡರಾಗಿದ್ದರು. ಜೆಡಿಎಸ್ ಮುಖಂಡ ಕೊಂಡಜ್ಜಿ ಸಾವನ್ನು ಖಂಡಿಸಿರುವ ಜೆಡಿಎಸ್ ಶುಕ್ರವಾರ ಹರಿಹರ ಬಂದ್ಗೆ ಕರೆ ನೀಡಿತ್ತು.
|