'ರೀ ಸ್ವಾಮಿ ನಾನು ಹೇಳಿದ್ದಷ್ಟು ಮಾತ್ರ ಬರೆದುಕೊಂಡು ಹೊರಡಿ'-ಇದು ಭದ್ರಾವತಿ ಕಾಂಗ್ರೆಸ್ ಶಾಸಕ ಸಂಗಮೇಶ್ ಪತ್ರಕರ್ತರಿಗೆ ತಾಕೀತು ಮಾಡಿದ ಪರಿ ಇದು. ಶಾಸಕರ ಈ ಅಧಿಕಪ್ರಸಂಗವನ್ನು ಖಂಡಿಸಿ ಪತ್ರಿಕಾಗೋಷ್ಠಿಯನ್ನು ಬಹಿಷ್ಕರಿಸಿದ ಘಟನೆ ಸೋಮವಾರ ನಡೆದಿದೆ.
ಸಂಗಮೇಶ್ ಅವರು ರಾಜೀನಾಮೆ ನೀಡಬೇಕು ಎಂಬ ಮಾಜಿ ಸಚಿವ ಕುಮಾರ್ ಬಂಗಾರಪ್ಪ ಹೇಳಿಕೆಗೆ ಪ್ರತಿಯಾಗಿ ಇಂದು ಶಿವಮೊಗ್ಗದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತಿದ್ದ ಸಂದರ್ಭದಲ್ಲಿ ಪತ್ರಕರ್ತರು ಲಂಚ ಆರೋಪದ ಕುರಿತು ಪದೇ, ಪದೇ ಪ್ರಶ್ನಿಸಿದಾಗ ಸುದ್ದಿಗಾರರ ಮೇಲೆಯೇ ಹರಿಹಾಯ್ದಿದ್ದರು.
1999ರ ಚುನಾವಣೆ ಸಂದರ್ಭದಲ್ಲಿ ಬಿ ಫಾರಂಗಾಗಿ ಬಂಗಾರಪ್ಪ ಅವರಿಗೆ 50ಲಕ್ಷ ರೂ. ಕಪ್ಪು ಹಣ ನೀಡಿದ್ದೆ ಎಂದು ಆರೋಪಿಸಿದರು. ರಾಜಕಾರಣದಲ್ಲಿ ಕಪ್ಪು ಹಣದ್ದೇ ದರ್ಬಾರು ನಡೆಯುತ್ತಿದೆ. ಆ ನಿಟ್ಟಿನಲ್ಲಿ ಬಂಗಾರಪ್ಪ ಆಗಲಿ ಅವರ ಮಕ್ಕಳಿಗಾಗಲಿ ನನ್ನ ವಿರುದ್ಧ ಮಾತನಾಡುವ ನೈತಿಕ ಹಕ್ಕಿಲ್ಲ. ಅವರೆಲ್ಲ ನನ್ನ ಋಣದಲ್ಲಿದ್ದಾರೆ ಎಂದರು.
1999ರಲ್ಲಿ ತಾವು ಬಂಗಾಪ್ಪನವರಿಗೆ ಹಣ ಕೊಟ್ಟಿದ್ದಿದ್ದರೆ ಆ ವಿಷಯವನ್ನು ಆವಾಗಲೇ ಬಹಿರಂಗಪಡಿಸಬಹುದಿತ್ತಲ, ಇಷ್ಟು ವರ್ಷ ಯಾಕೆ ವಿಳಂಬ ಮಾಡಿದ್ದೀರಿ?ಎಂದು ಸುದ್ದಿಗಾರರು ಪ್ರಶ್ನಿಸಿದಾಗ, ಗಂಡ-ಹೆಂಡತಿ ನಡುವೆ ವಿವಾದ ಎದ್ದಾಗ ಮಾತ್ರ ತಾನೇ ವಿಷಯ ಬಹಿರಂಗ ಮಾಡುತ್ತಾರೆ, ಅದನ್ನು ಬಿಟ್ಟು ಮೊದಲೇ ಹೇಳುತ್ತಾರಾ?ಎಂದು ತಿರುಗೇಟು ನೀಡಿದಾಗ, ಪತ್ರಕರ್ತರು ಮತ್ತೆ ಪ್ರಶ್ನಿಸಿದಾಗ ಅಸಮಾಧಾನಗೊಂಡ ಶಾಸಕ ಸಂಗಮೇಶ್ ಗರಂ ಆಗಿ ಮಾತನಾಡಿದ ಘಟನೆ ನಡೆಯಿತು.
ಲೋಕಸಭಾ ಚುನಾವಣೆಯ 2ನೇ ಹಾಗೂ ಅಂತಿಮ ಪ್ರಚಾರ ಸಂದರ್ಭದಲ್ಲಿ, ಭದ್ರಾವತಿಯಲ್ಲಿ ಬಂಗಾರಪ್ಪ ಹಾಗೂ ಸಂಗಮೇಶ್ ಬೆಂಬಲಿಗರ ನಡುವೆ ಹೊಯ್ ಕೈ ನಡೆದಿತ್ತು. ಆ ಸಂದರ್ಭದಲ್ಲಿಯೇ ಸಂಗಮೇಶ್ ಬಂಗಾರಪ್ಪ ವಿರುದ್ಧ ಗಂಭೀರವಾಗಿ ವಾಗ್ದಾಳಿ ನಡೆಸಿದ್ದರು. |