ಮಾಜಿ ಮುಖ್ಯಮಂತ್ರಿ ಎಸ್. ಬಂಗಾರಪ್ಪ ಅವರಿಗೆ 1999ರಲ್ಲಿ ತಾವು ನೀಡಿದ್ದು ಕಪ್ಪು ಹಣ. ಇದರಲ್ಲಿ ಮುಚ್ಚುಮರೆ ಮಾಡುವುದೇನಿದೆ ಎಂದು ಭದ್ರಾವತಿ ಕಾಂಗ್ರೆಸ್ ಶಾಸಕ ಸಂಗಮೇಶ್ ಹೇಳಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜಕೀಯದಲ್ಲಿ ಯಾರೋಬ್ಬರೂ ಸಾಚಾ ಅಲ್ಲ. ಪ್ರತಿಯೊಬ್ಬರಲ್ಲಿಯೂ ಇರುವುದು ಕಪ್ಪು ಹಣವೇ. ಈ ಬಗ್ಗೆ ಬಹಿರಂಗವಾಗಿ ಎಲ್ಲಿ ಬೇಕಾದರೂ ಹೇಳಲು ಸಿದ್ಧ ಎಂದು ತಿಳಿಸಿದ್ದಾರೆ.
ಈ ಬಾರಿಯೂ ಬಂಗಾರಪ್ಪನವರು ತಮ್ಮಲ್ಲಿ ಕಪ್ಪು ಹಣ ಕೇಳಿದರು. ಆದರೆ ಕೊಡಲು ಒಪ್ಪದ ಕಾರಣ ನನ್ನ ವಿರುದ್ಧ ಇಲ್ಲಸಲ್ಲದ ಆರೋಪ ಹೊರಿಸಿದ್ದಾರೆ ಎಂದು ದೂರಿದ ಅವರು, ರಾಜೀನಾಮೆ ನೀಡಬೇಕೆಂದು ಹೇಳಿಕೆ ನೀಡಿರುವ ಬಂಗಾರಪ್ಪ ವಿರುದ್ಧ ತೀವ್ರ ಆಕ್ಷೇಪ ವ್ಯಕ್ತಪಡಿಸಿದರು.
ಬೇರೆ ಬೇರೆ ಪಕ್ಷಕ್ಕೆ ಹೋದ ಪಕ್ಷಾಂತರಿ ಬಂಗಾರಪ್ಪ ರಾಜಕೀಯ ನಿವೃತ್ತಿ ಪಡೆಯುವುದು ಸೂಕ್ತ ಎಂದು ಆಗ್ರಹಿಸಿದ ಸಂಗಮೇಶ್, ಪಕ್ಷ ವಿರೋಧಿ ಚಟುವಟಿಕೆ ನಡೆಸಿದ ಆರೋಪ ಹೊತ್ತಿರುವ ಕುಮಾರ್ ಬಂಗಾರಪ್ಪ ಕಾಂಗ್ರೆಸ್ ಪಕ್ಷಕ್ಕೆ ರಾಜೀನಾಮೆ ನೀಡಬೇಕೆಂದು ಒತ್ತಾಯಿಸಿದರು.
|