ಚಿತ್ರದುರ್ಗ: ಇಲ್ಲಿನ ಕೆಳಗೋಟಿ ಬಡಾವಣೆಯ ರಸ್ತೆ ಅಗಲೀಕರಣ ನೆಪದಲ್ಲಿ ನಗರಸಭೆಯು ಶಿವ ಮಂದಿರವನ್ನು ನೆಲ ಸಮಗೊಳಿಸಿರುವ ಘಟನೆಯನ್ನು ಖಂಡಿಸಿ ಸಾರ್ವಜನಿಕರು ಪ್ರತಿಭಟನೆ ನಡೆಸಿದ್ದು, ನಗರದಲ್ಲಿ ಆಘೋಷಿತ ಬಂದ್ ಏರ್ಪಟ್ಟಿದೆ.
ಯಾವುದೇ ಮುನ್ಸೂಚನೆ ನೀಡದೆ, ನಗರಸಭೆಯು ಮಂದಿರವನ್ನು ಬುಲ್ಡೋಜರ್ ಬಳಸಿ ನೆಲಸಮಗೊಳಿಸಿರುವುದು ಸಾರ್ವಜನಿಕರನ್ನು ರೊಚ್ಚಿಗೆಬ್ಬಿಸಿದ್ದು, ಅವರು ಇಲ್ಲಿನ ಗಾಂಧಿ ವೃತ್ತದ ಬಳಿ ಪ್ರತಿಭಟನೆ ನಡೆಸಿದ್ದಾರೆ.
ಹಿಂದೂ ಸಂಘಟನೆಗಳ ಬೆಂಬಲದೊಂದಿಗೆ ನಡೆಸಿರುವ ಈ ಪ್ರತಿಭಟನಾ ಸ್ಥಳಕ್ಕೆ ಆಗಮಿಸಿರುವ ಜಿಲ್ಲಾಧಿಕಾರಿಗಳು ಮುಷ್ಕರನಿರತರನ್ನು ಸಮಾಧಾನಿಸಲು ಯತ್ನಿಸಿ ಮಂದಿರವನ್ನು ಪುನರ್ ನಿರ್ಮಿಸುವ ಭರವಸೆ ನೀಡಿದ್ದಾರೆ. ಅಲ್ಲದೆ, ದೇವಾಲಯ ಧ್ವಂಸಕ್ಕೆ ಕಾರಣವಾಗಿರುವ ನಗರಸಭಾ ಅಧಿಕಾರಿಯನ್ನು ಅಮಾನತು ಮಾಡುವುದಾಗಿಯೂ ನುಡಿದರು.
ಜಿಲ್ಲಾಧಿಕಾರಿಗಳ ಭರವಸೆ ಬಳಿಕ ಸಾರ್ವಜನಿಕರು ಪ್ರತಿಭಟನೆಯನ್ನು ಹಿಂತೆಗೆದುಕೊಂಡಿದ್ದಾರಾದರೂ, ಸಾಯಂಕಾಲ ಐದುಗಂಟೆಯೊಳಗಾಗಿ ಮಂದಿರ ನಿರ್ಮಾಣಕ್ಕೆ ಆಡಳಿತವು ಮುಂದಾಗದಿದ್ದರೆ, ಸೋಮವಾರ ಮತ್ತೆ ಉಗ್ರ ಪ್ರತಿಭಟನೆ ನಡೆಸುವುದಾಗಿ ಬೆದರಿಕೆ ಹಾಕಿದೆ. |