ರಸ್ತೆ ಸಮೀಪ ಇರುವ ದೇವಸ್ಥಾನವೊಂದನ್ನು ನಗರಸಭೆ ಸಿಬ್ಬಂದಿಗಳು ರಾತ್ರಿ ತೆರವುಗೊಳಿಸಿದ ಕ್ರಮವನ್ನು ವಿರೋಧಿಸಿ ಬಜರಂಗದಳದ ನೇತೃತ್ವದಲ್ಲಿ ಸ್ಥಳೀಯ ನಾಗರಿಕರು ಭಾನುವಾರ ಪ್ರತಿಭಟನೆ ನಡೆಸಿದ ಪರಿಣಾಮ ಕೆಲಕಾಲ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿತ್ತು.
ನಗರದ ಕೆಳಗೋಟೆಯಲ್ಲಿರುವ ಆಕಾಶವಾಣಿ ಸಮೀಪ ಮಂಜುನಾಥ ಸ್ವಾಮಿ ದೇವಸ್ಥಾನವನ್ನು ನಿರ್ಮಿಸಲಾಗಿತ್ತು. ರಸ್ತೆ ಅಗಲೀಕರಣಕ್ಕೆ ಅಡ್ಡಿಯಾಗುತ್ತದೆಂಬ ಕಾರಣಕ್ಕೆ ನಗರಸಭೆ ಸಿಬ್ಬಂದಿ ಭಾನುವಾರ ಬೆಳಗಿನ ಜಾವ ಯಾರಿಗೂ ತಿಳಿಯದಂತೆ ಜೆಸಿಬಿ ಯಂತ್ರ ತಂದು ದೇವಸ್ಥಾನವನ್ನು ತೆರವುಗೊಳಿಸಿದ್ದರು. ಇದರಿಂದ ದೇವಸ್ಥಾನದಲ್ಲಿದ್ದ ಶಿವಲಿಂಗ, ಆಂಜನೇಯ ಸೇರಿದಂತೆ ಇನ್ನಿತರ ವಿಗ್ರಹಗಳು ಹಾನಿಗೊಳಗಾಗಿವೆ ಎಂಬುದು ಪ್ರತಿಭಟನಾಕಾರರ ಆರೋಪ.
ಭಾನುವಾರ ಮುಂಜಾನೆ ದೇವಸ್ಥಾನ ನೆಲಕ್ಕುರುಳಿರುವುದನ್ನು ಕಂಡು ನೂರಾರು ಸಂಖ್ಯೆಯಲ್ಲಿ ಸ್ಥಳೀಯ ನಿವಾಸಿಗಳು ಗುಂಪುಗೂಡಿ, ನಗರಸಭೆ ಕ್ರಮವನ್ನು ವಿರೋಧಿಸಿ ಪ್ರತಿಭಟನೆ ನಡೆಸಿದ್ದರು. ಅಧಿಕಾರಿಗಳ ವಿರುದ್ಧ ಘೋಷಣೆಗಳನ್ನು ಕೂಗಿದ ಜನರು ದೇವಸ್ಥಾನಕ್ಕೆ ಹಾನಿ ಮಾಡಿರುವವರನ್ನು ಅಮಾನತುಗೊಳಿಸಬೇಕೆಂದು ಒತ್ತಾಯಿಸಿದರು.
|