ಜೆಡಿಎಸ್ ಮುಖಂಡ ಕೊಂಡಜ್ಜಿ ಕೊಲೆ ಆರೋಪದ ಹಿನ್ನೆಲೆಯಲ್ಲಿ ಹರಿಹರದ ಇಬ್ಬರು ಪೊಲೀಸ್ ಅಧಿಕಾರಿಗಳನ್ನು ಅಮಾನತು ಮಾಡಲಾಗಿದೆ ಎಂದು ಪೊಲೀಸ್ ವರಿಷ್ಠಾಧಿಕಾರಿ ಸಂದೀಪ್ ಪಾಟೀಲ್ ತಿಳಿಸಿದ್ದಾರೆ.
ಘಟನೆಯ ಸಂದರ್ಭದಲ್ಲಿ ಮುನ್ನೆಚ್ಚರಿಕೆ ಕೈಗೊಳ್ಳದೆ, ಕರ್ತವ್ಯ ಲೋಪ ಎಸಗಿದ ಆರೋಪದ ಮೇಲೆ ಸಿಪಿಐ ರಮೇಶ್ ಕುಮಾರ್ ಹಾಗೂ ಪಿಎಸ್ಐ ಮೆಹಬೂಬ್ ಅಲಿ ಎಂಬಿಬ್ಬರನ್ನು ಅಮಾನತು ಮಾಡಲಾಗಿದೆ.
ಕಾಂಗ್ರೆಸ್ ಅಭ್ಯರ್ಥಿಯನ್ನು ಬೆಂಬಲಿಸಿದ ವಿಷಯದಲ್ಲಿ ದಾವಣಗೆರೆಯ ಹರಿಹರದಲ್ಲಿ ಬಿಜೆಪಿ ಮತ್ತು ಜೆಡಿಎಸ್ ಕಾರ್ಯಕರ್ತರ ನಡುವೆ ಮಾರಾಮಾರಿ ನಡೆದ ಸಂದರ್ಭದಲ್ಲಿ ಜೆಡಿಎಸ್ ಕಾರ್ಯಕರ್ತ ವಿಜಯ್ ಕುಮಾರ್ ಕೊಂಡಜ್ಜಿ ಸಾವನ್ನಪ್ಪಿದ್ದರು.
ದಾವಣಗೆರೆಯ ಹರಿಹರದಲ್ಲಿ ಜೆಡಿಎಸ್ ಮುಖಂಡ ವಿಜಯ್ ಕುಮಾರ್ ಕೊಂಡಜ್ಜಿ ಎಂಬವರು ಕಾಂಗ್ರೆಸ್ ಅಭ್ಯರ್ಥಿಯನ್ನು ಬೆಂಬಲಿಸಿದ ಹಿನ್ನೆಲೆಯಲ್ಲಿ ಬಿಜೆಪಿ ಮತ್ತು ಜೆಡಿಎಸ್ ಕಾರ್ಯಕರ್ತರ ನಡುವೆ ಹೊಯ್ ಕೈ ನಡೆದ ಸಂದರ್ಭದಲ್ಲಿ ಕೊಂಡಜ್ಜಿ ಅವರಿಗೆ ತೀವ್ರವಾದ ಹೊಡೆತ ಬಿದ್ದಿತ್ತು. ಕೂಡಲೇ ಅವರನ್ನು ಸ್ಥಳೀಯ ಆಸ್ಪತ್ರೆಗೆ ಸಾಗಿಸಲಾಯಿತಾದರೂ ದಾರಿ ಮಧ್ಯೆಯೇ ಕೊನೆಯುಸಿರೆಳೆದ ಘಟನೆ ಏ.30ರಂದು ನಡೆದಿತ್ತು.
ಜೆಡಿಎಸ್ ಮುಖಂಡ ಕೊಂಡಜ್ಜಿ ಸಾವನ್ನು ಖಂಡಿಸಿರುವ ಜೆಡಿಎಸ್ ಶುಕ್ರವಾರ ಹರಿಹರ ಬಂದ್ಗೆ ಕರೆ ನೀಡಿತ್ತು. ಅಲ್ಲದೇ ಘಟನೆಯ ಪ್ರಮುಖ ಆರೋಪಿ ಮಾನೆ ಎಂಬಾತನನ್ನು ಪೊಲೀಸರು ಇತ್ತೀಚೆಗೆ ಬಂಧಿಸಿದ್ದರು. |