ಮೈಸೂರು ಸಮೀಪದ ಕ್ಯಾತಮಾರನಹಳ್ಳಿಯಲ್ಲಿ ಇತ್ತೀಚೆಗೆ ನಡೆದ ಕೋಮುಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ 13ಮಂದಿಯನ್ನು ಪೊಲೀಸರು ಬಂಧಿಸಿದ್ದು, ಅವರನ್ನು ಕೂಡಲೇ ಬಿಡುಗಡೆ ಮಾಡಬೇಕೆಂದು ಒತ್ತಾಯಿಸಿ ಒಂದು ಸಮುದಾಯದ ಗುಂಪು ಠಾಣೆಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದ ಘಟನೆ ಮಂಗಳವಾರ ನಡೆದಿದೆ.
ಕ್ಯಾತಮಾರನಹಳ್ಳಿಯಲ್ಲಿ ನಡೆದ ಕೋಮುಗಲಭೆ ಕುರಿತಂತೆ ಪೊಲೀಸರು ಸೋಮವಾರ ರಾತ್ರಿ 30ಮಂದಿಯನ್ನು ಬಂಧಿಸಿದ್ದಾರೆ. ಆದರೆ ಇದೀಗ ಕೇವಲ 13ಮಂದಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ಹೇಳುತ್ತಿದ್ದಾರೆ ಎಂದು ಪ್ರತಿಭಟನಾಕಾರರು ಆರೋಪಿಸಿದ್ದಾರೆ. ಪೊಲೀಸರು ಪೂರ್ವಾಗ್ರಹ ಪೀಡಿತರಾಗಿ ಮುಸ್ಲಿಂ ಸಮುದಾಯದ ವ್ಯಕ್ತಿಗಳನ್ನು ಬಂಧಿಸಿದ್ದಾರೆ. ಅವರು ಅಮಾಯಕರಾಗಿದ್ದು ಅವರನ್ನು ಬಿಡುಗಡೆ ಮಾಡಿ ಎಂದು ಒತ್ತಾಯಿಸಿ ಉದಯಗಿರಿ ಪೊಲೀಸ್ ಠಾಣೆಗೆ ಮುತ್ತಿಗೆ ಹಾಕಿದ ಪರಿಣಾಮ ಬಿಗುವಿನ ವಾತಾವರಣ ನಿರ್ಮಾಣಗೊಂಡಿತ್ತು.
ಕೆಎಫ್ಡಿ ಸಂಘಟನೆ ನೇತೃತ್ವದಲ್ಲಿ ಭಾರೀ ಸಂಖ್ಯೆಯಲ್ಲಿ ಠಾಣೆಗೆ ಸಾರ್ವಜನಿಕರು ಮುತ್ತಿಗೆ ಹಾಕಿ ಬಂಧಿತರನ್ನು ಬಿಡುಗಡೆ ಮಾಡಬೇಕು ಎಂದು ಆಗ್ರಹಿಸಿದ್ದಾರೆ. ಆದರೆ ಗಲಭೆ ಕುರಿತಂತೆ ವಿಚಾರಣೆಗಾಗಿ ಶಂಕಿತರನ್ನು ಠಾಣೆಗೆ ಕರೆ ತಂದಿದ್ದು, ತನಿಖೆ ಪೂರ್ಣಗೊಂಡ ನಂತರ ನಿರ್ಧಾರ ಕೈಗೊಳ್ಳುತ್ತೇವೆ. ಬಂಧಿತರೆಲ್ಲಾ ಆರೋಪಿಗಳಲ್ಲ ಎಂದು ಪೊಲೀಸ್ ವರಿಷ್ಠಾಧಿಕಾರಿ ಸಮಜಾಯಿಷಿ ನೀಡಿದ್ದರು. ಆದರೂ ಕ್ಯಾತಮಾರನಹಳ್ಳಿ ಪರಿಸ್ಥಿತಿ ಬೂದಿ ಮುಚ್ಚಿದ ಕೆಂಡದಂತಿದೆ.
ಏಪ್ರಿಲ್ 1ರಂದು ಕ್ಯಾತಮಾರನಹಳ್ಳಿಯಲ್ಲಿ ಎರಡು ಕೋಮುಗಳ ನಡುವೆ ಕ್ಷುಲ್ಲಕ ಕಾರಣದಿಂದ ಉದ್ಭವಿಸಿದ ಕೋಮುಗಲಭೆ ಒಂದು ವಾರಗಳ ಕಾಲ ಭೀತಿಯನ್ನು ಮೂಡಿಸಿತ್ತು. ಪ್ರದೇಶದಾದ್ಯಂತ ನಿಷೇಧಾಜ್ಞೆಯನ್ನೂ ಕೂಡ ಜಾರಿ ಮಾಡಲಾಗಿತ್ತು. ಆಟೋ, ಎತ್ತಿನಗಾಡಿ, ಅಂಗಡಿ, ಬೈಕ್ಗಳೆಲ್ಲಾ ಬೆಂಕಿಗೆ ಆಹುತಿಯಾಗಿದ್ದವು.ಗಲಭೆ ನೆಪದಲ್ಲಿ ಲೂಟಿ ನಡೆದಿತ್ತು. ಹಲವಾರು ಮಂದಿ ಚಿನ್ನಾಭರಣ, ಹಣ ಕಳೆದುಕೊಂಡಿದ್ದರು. |