ನ್ಯಾಯಾಲಯದ ಎಚ್ಚರಿಕೆಯ ನಡುವೆಯೂ ಮುಷ್ಕರ ನಿರತರಾಗಿದ್ದ ಕಿರಿಯ ವೈದ್ಯರ ವಿರುದ್ಧ ಕ್ರಮ ಕೈಗೊಳ್ಳಿ ಎಂದು ಕೋರ್ಟ್ ಆದೇಶಿಸಿರುವ ಉದ್ದೇಶ, ಅವರು ಕೆಲಸಕ್ಕೆ ಮತ್ತೆ ಹಾಜರಾಗದಂತೆ ತಡೆ ಒಡ್ಡುವುದು ಅಲ್ಲ. ಕೋರ್ಟ್ ಆದೇಶವನ್ನು ತಪ್ಪಾಗಿ ಅರ್ಥೈಸಿಕೊಳ್ಳುವುದು ಬೇಡ ಎಂದು ನ್ಯಾಯಮೂರ್ತಿ ಎನ್.ಕುಮಾರ್ ನೇತೃತ್ವದ ರಜಾಕಾಲದ ಪೀಠ ಅಭಿಪ್ರಾಯ ವ್ಯಕ್ತಪಡಿಸಿದೆ.
ಆದರೆ ಮುಷ್ಕರವನ್ನು ಮುಂದುವರಿಸಿದರೆ ಅವರ ವಿರುದ್ಧ ಕಾನೂನು ರೀತ್ಯಾ ಕ್ರಮ ಕೈಗೊಳ್ಳಲು ಸರ್ಕಾರಕ್ಕೆ ಅಧಿಕಾರ ಇರುವುದಾಗಿ ಪೀಠ ತಿಳಿಸಿದೆ. ಮುಷ್ಕರ ನಿರತರಾಗಿದ್ದ ಕಿರಿಯ ವೈದ್ಯರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮಕ್ಕೆ ಕೋರ್ಟ್ ಸೋಮವಾರ ಆದೇಶಿಸಿದ್ದ ಹಿನ್ನೆಲೆಯಲ್ಲಿ ಎಲ್ಲ ವೈದ್ಯರಿಗೂ ನೋಟಿಸ್ ನೀಡಲಾಗಿದ್ದು, ಈ ಪ್ರಕ್ರಿಯೆ ಮುಗಿಯುವವರೆಗೆ ಅವರನ್ನು ಪುನಃ ಕೆಲಸಕ್ಕೆ ಸೇರಿಸಿಕೊಳ್ಳುವುದಿಲ್ಲ ಎಂದು ಹೆಚ್ಚುವರಿ ಅಡ್ವೊಕೇಟ್ ಜನರಲ್ ಅಶೋಕ್ ಹಾರ್ನಳ್ಳಿ ಅವರು ಪೀಠಕ್ಕೆ ತಿಳಿಸಿದ ಸಂದರ್ಭದಲ್ಲಿ ಕೋರ್ಟ್ ಈ ಸ್ಪಷ್ಟನೆ ನೀಡಿದೆ.
ಹೈಕೋರ್ಟ್ ಆದೇಶದ ಮೇರೆಗೆ ಸರ್ಕಾರ ಮುಷ್ಕರ ನಿರತರ ವಿರುದ್ಧ ತೆಗೆದುಕೊಂಡಿರುವ ಕ್ರಮಗಳ ಬಗ್ಗೆ ಮಂಗಳವಾರ ಪ್ರಮಾಣ ಪತ್ರ ಸಲ್ಲಿಸಿದೆ |