ಹಾವೇರಿ ಗೋಲಿಬಾರ್ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಸಚಿವ ಎಚ್.ಕೆ.ಪಾಟೀಲ್ಗೆ ನ್ಯಾ.ಜಗನ್ನಾಥ್ ಶೆಟ್ಟಿ ನೇತೃತ್ವದ ಏಕಸದಸ್ಯ ವಿಚಾರಣಾ ಆಯೋಗ ಬುಧವಾರ ಸಮನ್ಸ್ ಜಾರಿ ಮಾಡಿದೆ.ಗೋಲಿಬಾರ್ ನಡೆದ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡ ಪಾಟೀಲ್, ಹಾವೇರಿ ಪ್ರಕರಣಕ್ಕೆ ಸಂಬಂಧಿಸಿದಂತೆ ಆಕ್ರೋಶದ ಮಾತುಗಳನ್ನಾಡಿದ್ದರು. ಈ ರೀತಿಯಾಗಿ ಹೇಳಿಕೆ ನೀಡುವುದರಿಂದ ಜನರಲ್ಲಿಯೂ ಗೊಂದಲ ಮೂಡುತ್ತದೆ. ಅಲ್ಲದೇ ವಿಚಾರಣಾ ಆಯೋಗದ ಮೇಲೂ ಪರೋಕ್ಷವಾಗಿ ಪರಿಣಾಮ ಬೀರುತ್ತದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿರುವ ಆಯೋಗ, ಆ ನಿಟ್ಟಿನಲ್ಲಿ ಪಾಟೀಲ್ ಹಾಗೂ ಕೆಲವು ಮಾಧ್ಯಮಗಳಿಗೆ ವಿವರಣೆ ನೀಡುವಂತೆ ಸಮನ್ಸ್ ಜಾರಿ ಮಾಡಲಾಗಿದೆ ಎಂದು ತಿಳಿಸಿದರು.ಹಾವೇರಿ ಗೋಲಿಬಾರ್ ಪ್ರಕರಣದ ಕುರಿತಂತೆ ಮೇ 28ರಂದು ನಡೆಯಲಿರುವ ವಿಚಾರಣೆ ವೇಳೆ ಖುದ್ದು ಹಾಜರಾಗುವಂತೆ ಆಯೋಗ ಸೂಚನೆ ನೀಡಿದೆ.ಘಟನೆ ವಿವರ: ರೈತರ ಮೇಲೆ ಗುಂಡು ಹಾರಿಸಿರುವ ಬಿಜೆಪಿಯವರಿಗೆ ರೈತರ ಮತ ಕೇಳುವ ನೈತಿಕ ಹಕ್ಕಿಲ್ಲ ಎಂದು ಮಾಜಿ ಸಚಿವ ಎಚ್.ಕೆ.ಪಾಟೀಲ್ ಗೋಲಿಬಾರ್ ಘಟನೆಯ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡುತ್ತ ತಿಳಿಸಿದ್ದರು. ರೈತರ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕರಿಸಿದ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ಎಂಟು ದಿನಗಳಲ್ಲಿಯೇ ರೈತರ ಮೇಲೆ ಗೋಲಿಬಾರ್ ನಡೆಸಿದೆ. ನಂತರ ಜಿಲ್ಲಾಧಿಕಾರಿಗಳಿಂದ ಗೋಲಿಬಾರ್ನಿಂದ ಮೃತಪಟ್ಟವರು ರೈತರೇ ಅಲ್ಲ, ಅವರು ಸಾಮಾಜಿಕ ಶಾಂತಿ ಕದಡಲು ಬಂದಿದ್ದರು ಎಂದು ಹೇಳಿಕೆ ಕೊಡಿಸಿದ್ದಾರೆ. ಇದು ಯಾವ ನ್ಯಾಯ ಎಂದು ಆ ಸಂದರ್ಭದಲ್ಲಿ ಖಾರವಾಗಿ ಪ್ರಶ್ನಿಸಿದ್ದರು. ಈ ಹೇಳಿಕೆ ಹಿನ್ನೆಲೆಯಲ್ಲಿ ಎಚ್.ಕೆ.ಪಾಟೀಲ್ ಅವರಿಗೆ ಆಯೋಗ ಸಮನ್ಸ್ ಜಾರಿ ಮಾಡಿದೆ. |