ಚಿತ್ರರಂಗದಲ್ಲಿ ಗಳಸ್ಯ-ಕಂಠಸ್ಯರಾಗಿದ್ದ ನಟ ಅಂಬರೀಷ್ ಹಾಗೂ ಜಗ್ಗೇಶ್ ನಡುವೆ ರಾಜಕೀಯದ ಕೆಸರೆರಚಾಟದಿಂದಾಗಿ ವೈಮನಸ್ಸು ತಲೆದೋರಿದ್ದು, ಇದೀಗ ಅಂಬಿ ವಿರುದ್ಧ ಜಗ್ಗೇಶ್ ಅವಹೇಳನಕಾರಿಯಾಗಿ ಮಾತನಾಡಿರುವುದನ್ನು ಖಂಡಿಸಿ ಅಖಿಲ ಕರ್ನಾಟಕ ಅಂಬರೀಷ್ ಅಭಿಮಾನಿಗಳ ಸಂಘದ ಸದಸ್ಯರು ನಗರದ ನವರಂಗ್ ವೃತ್ತದಲ್ಲಿ ಬುಧವಾರ ಪ್ರತಿಭಟನೆ ನಡೆಸಿದರು.
ಚಿತ್ರರಂಗ ಮತ್ತು ರಾಜಕೀಯ ರಂಗಕ್ಕೆ ಅಂಬರೀಷ್ ಅವರು ನೀಡಿರುವ ಕೊಡುಗೆ ಅಪಾರ, ಅಂತಹ ನಟ ರಾಜಕಾರಣಿ ಬಗ್ಗೆ ಮತಾಡಿರುವ ಜಗ್ಗೇಶ್ ಕೀಳುತನ ತೋರಿಸಿದ್ದಾರೆ ಎಂದು ಪ್ರತಿಭಟನಾಕಾರರು ದೂರಿದರು. ಈ ಸಂದರ್ಭದಲ್ಲಿ ಜಗ್ಗೇಶ್ ಅವರ ಭೂತದಹನ ಮಾಡುವುದರ ಮೂಲಕ ತಮ್ಮ ಆಕ್ರೋಶ ಹೊರಹಾಕಿದರು.
ಅಂಬಿ ಅವರ ಪ್ರೋತ್ಸಾಹ, ಬೆಂಬಲದಿಂದ ಕನ್ನಡ ಚಿತ್ರರಂಗದಲ್ಲಿ ಸ್ಥಾನ ಪಡೆದ ಜಗ್ಗೇಶ್ ಅವರನ್ನೇ ತೆಗಳುವ ಮೂಲಕ ಹೀನವಾಗಿ ನಡೆದುಕೊಂಡಿದ್ದಾರೆ. ಅಂಬರೀಷ್ ಸರ್ವೋತ್ತಮ ನಾಯಕನಲ್ಲ ಎಂದು ಹೇಳಿಕೆ ನೀಡಿದ್ದಾರೆ. ಅವರ ಮನೆ ಬಾಗಿಲು ಕಾಯುವಾಗ ಇದು ಜಗ್ಗೇಶ್ಗೆ ಗೊತ್ತಿರಲಿಲ್ಲವೇ ಎಂದು ಅಖಿಲ ಕರ್ನಾಟಕ ಅಂಬರೀಷ್ ಅಭಿಮಾನಿಗಳ ಸಂಘದ ಉಪಾಧ್ಯಕ್ಷ ಟಿ.ಕೆ.ರಾಮು ಪ್ರಶ್ನಿಸಿದರು. |