ರಾಜ್ಯದ ಆರ್ಥಿಕ ಪರಿಸ್ಥಿತಿ ತೀರಾ ಹದಗೆಟ್ಟಿದೆ. ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ದಿವಾಳಿ ಸರ್ಕಾರದ ಸುಳ್ಳಿನ ಸರದಾರರಾಗಿ ಕಂಗೊಳಿಸುತ್ತಿದ್ದಾರೆ ಎಂದು ಜೆಡಿಎಸ್ ರಾಜ್ಯ ಘಟಕದ ವಕ್ತಾರ ವೈ,ಎಸ್.ವಿ.ದತ್ತ ಟೀಕಿಸಿದರು.
ಕಳೆದ ವರ್ಷ ಎಂಟು ಸಾವಿರ ಕೋಟಿ ರೂಪಾಯಿ, ಈ ವರ್ಷ 8,500 ರೂ.ಕೋಟಿ ಸಾಲ ಪಡೆದಿರುವುದನ್ನು ಯಡಿಯೂರಪ್ಪ ಹೇಳುವ ಮೂಲಕ 5 ವರ್ಷದಲ್ಲಿ ಕನ್ನಡಿಗರನ್ನು ಸಾಲಗಾರರನ್ನಾಗಿ ಮಾಡುವ ಸೂಚನೆ ನೀಡಿದ್ದಾರೆ ಎಂದು ಸುದ್ದಿಗೋಷ್ಠಿಯಲ್ಲಿ ವ್ಯಂಗ್ಯವಾಡಿದರು.
2008-09ನೇ ಸಾಲಿನಲ್ಲಿ ಎಷ್ಟು ಸಾಲ ಮಾಡಲಾಗಿತ್ತು, ತೆರಿಗೆ ಮೂಲಕ ಸಂಗ್ರಹವಾಗಿರುವ ಹಣ ಮತ್ತು ಹಂಚಿಕೆ ಬಗ್ಗೆ ಶ್ವೇತ ಪತ್ರ ಹೊರಡಿಸಬೇಕು ಎಂದು ಅವರು ಆಗ್ರಹಿಸಿದರು.
ಸಣ್ಣ ರೈತರಿಗೆ 500 ಕೋಟಿ ರೂ.ಸಹಾಯಧನ ನೀಡುವುದಾಗಿ ಹೇಳಿದ್ದರು. ಆದರೆ ಇದುವರೆಗೆ 220ಕೋಟಿ ರೂ.ನೀಡಿದ್ದಾರೆ. ಉದ್ದೇಶಿತ ರಾಯಚೂರು ಕೃಷಿ ವಿ.ವಿ.ಗೆ ನೀಡಿರುವುದು 10ಲಕ್ಷ ರೂ.ಮಾತ್ರ. ಕೊಡಬೇಕಾಗಿದ್ದುದು 5ಕೋಟಿ ರೂ. ಆದರೂ ಯಡಿಯೂರಪ್ಪ ಮಾತ್ರ ಹೋದ ಕಡೆಯಲೆಲ್ಲ ಸುಳ್ಳು ಅಂಕಿ-ಅಂಶ ನೀಡುತ್ತಿದ್ದಾರೆ ಎಂದು ಆರೋಪಿಸಿದರು. |