ಲೆಕ್ಕಪತ್ರ ಮರುಪರಿಶೀಲನೆ ವಿವಾದಕ್ಕೆ ಸಂಬಂಧಿಸಿದಂತೆ ಕೆಎಂಎಫ್ ಸಲ್ಲಿಸಿದ್ದ ಮೇಲ್ಮನವಿಯನ್ನು ಹೈಕೋರ್ಟ್ ಗುರುವಾರ ವಜಾಗೊಳಿಸಿ ಲೆಕ್ಕಪತ್ರ ಮರುಪರಿಶೀಲನೆಗೆ ಗ್ರೀನ್ ಸಿಗ್ನಲ್ ನೀಡಿದೆ.ಲೆಕ್ಕಪತ್ರ ಮರುಪರಿಶೀಲನೆ ಸಂಬಂಧ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನೇತೃತ್ವದ ಸರ್ಕಾರ ಹಾಗೂ ಕೆಎಂಎಫ್ ಅಧ್ಯಕ್ಷ ಎಚ್.ಡಿ.ರೇವಣ್ಣ ನಡುವೆ ಜಿದ್ದಾಜಿದ್ದಿ ನಡೆಯುವ ಮೂಲಕ ರಾಜಕೀಯ ದಾಳವಾಗಿತ್ತು. ಇದೀಗ ಕೆಎಂಎಫ್ ವಿವಾದ ಕುರಿತಂತೆ ಸರ್ಕಾರದ ಆದೇಶವನ್ನು ಹೈಕೋರ್ಟ್ ಎತ್ತಿ ಹಿಡಿಯುವ ಮೂಲಕ ರೇವಣ್ಣ ಮುಖಭಂಗ ಅನುಭವಿಸಿದಂತಾಗಿದೆ.ಕೆಎಂಎಫ್ ಲೆಕ್ಕಮರುಪರಿಶೀನೆ ಕುರಿತಂತೆ ಸರ್ಕಾರ ನೀಡಿರುವ ಆದೇಶವನ್ನು ತಡೆ ಹಿಡಿಯಬೇಕೆಂದು ಕೋರಿ ಕೆಎಂಎಫ್ ಅಧ್ಯಕ್ಷ ರೇವಣ್ಣ ಹೈಕೋರ್ಟ್ಗೆ ಮೇಲ್ಮನವಿ ಸಲ್ಲಿಸಿದ್ದರು.ಗುರುವಾರ ಕೆಎಂಎಫ್ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಪೀಠ, ಸರ್ಕಾರದ ಆದೇಶವನ್ನು ಎತ್ತಿ ಹಿಡಿದಿದ್ದು, ಲೆಕ್ಕಮರುಪರಿಶೀನೆಗೆ ಹಸಿರು ನಿಶಾನೆ ತೋರಿರುವುದಾಗಿ ಹೇಳಿದೆ. |