ಅಮೆರಿಕದಿಂದ ನಗರದ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಗುರುವಾರ ಬಂದಿಳಿದ ಇಬ್ಬರು ಎಂಜಿನಿಯರ್ಗಳನ್ನು ತಪಾಸಣೆಗೊಳಪಡಿಸಿದಾಗ ಎಚ್1ಎನ್1 ಸೋಂಕಿನ ಶಂಕೆ ಇರುವುದಾಗಿ ವೈದ್ಯರು ತಿಳಿಸಿದ್ದಾರೆ.
ಅಮೆರಿಕದಿಂದ ನಗರಕ್ಕೆ ಆಗಮಿಸಿದ್ದ ಎಂಜಿನಿಯರ್ಗಳಾದ ಆಂಧ್ರಪ್ರದೇಶ ಅನಂತಪುರದ ಮಹೇಂದ್ರ ರೆಡ್ಡಿ ಹಾಗೂ ಹೈದರಾಬಾದ್ನ ಸತ್ಯಜಿತ್ ಚೌಹಾಣ್ ಅವರನ್ನು ವೈದ್ಯಕೀಯ ತಪಾಸಣೆಗೊಳಪಡಿಸಿದಾಗ ಹಂದಿಜ್ವರದ ಸೋಂಕಿನ ಶಂಕೆ ವ್ಯಕ್ತಪಡಿಸಿದ್ದು, ಹೆಚ್ಚಿನ ಪರೀಕ್ಷೆಗಾಗಿ ಅವರನ್ನು ರಾಜೀವ್ ಗಾಂಧಿ ಎದೆರೋಗ ಆಸ್ಪತ್ರೆಗೆ ದಾಖಲಿಸಲಾಗಿದೆ.
ಸೋಂಕು ಪತ್ತೆಯನ್ನು ಖಚಿತಪಡಿಸಿಕೊಳ್ಳಲು ರಕ್ತದ ಸ್ಯಾಂಪಲ್ನ್ನು ಪುಣೆಯ ಪ್ರಯೋಗಾಲಯಕ್ಕೆ ಕಳುಹಿಸಿಕೊಡಲಾಗಿದೆ. ಎರಡು ದಿನಗಳ ಬಳಿಕ ನಿಖರವಾದ ಮಾಹಿತಿ ಲಭ್ಯವಾಗಲಿದೆ ಎಂದು ವೈದ್ಯಾಧಿಕಾರಿಗಳು ತಿಳಿಸಿದ್ದಾರೆ.
ಜಾಗತಿಕವಾಗಿ ಭೀತಿ ಮೂಡಿಸಿದ ಹಂದಿಜ್ವರ ಇದೀಗ ಉದ್ಯಾನನಗರಿಯಲ್ಲೂ ಸೋಂಕು ಶಂಕೆ ಆತಂಕಕ್ಕೆ ಎಡೆಮಾಡಿಕೊಟ್ಟಿದೆ. ಈ ಹಿನ್ನೆಲೆಯಲ್ಲಿ ನೆರೆಯ ಆಂಧ್ರದಲ್ಲಿ ತೀವ್ರ ಕಟ್ಟೆಚ್ಚರ ವಹಿಸಲಾಗಿದೆ.
|