ಕಾಣೆಯಾದ ಯುವಕನ ಪತ್ತೆಯ ವಿಚಾರಣೆಗೆ ಕರೆ ತಂದ ವ್ಯಕ್ತಿಯೊಬ್ಬ ಪೊಲೀಸ್ ವಶದಲ್ಲಿ ಸಾವನ್ನಪ್ಪಿದ ಪ್ರಕರಣಕ್ಕೆ ಸಂಬಂಧಿಸಿದಂತೆ ತಲೆ ಮರೆಸಿಕೊಂಡಿರುವ ಐವರು ಪೊಲೀಸರಿಗಾಗಿ ಸಿಓಡಿ ಪೊಲೀಸರು ತೀವ್ರ ಶೋಧ ನಡೆಸುತ್ತಿದ್ದಾರೆ.
ಮಂಡ್ಯ ಜಿಲ್ಲೆ ಕೆ.ಆರ್. ಪೇಟೆ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಕಳೆದ ಫೆ.24ರಂದು ಭಾಸ್ಕರ ಎಂಬ ಯುವಕನ ನಾಪತ್ತೆ ಸಂಬಂಧ ವಿಚಾರಣೆಗೆ ಧನಂಜಯ್ ಎಂಬವರನ್ನು ಕರೆ ತರಲಾಗಿತ್ತು. ವಿಚಾರಣೆಗೆ ಕರೆತಂದಿದ್ದ ಧನಂಜಯ ಪೊಲೀಸರ ವಶದಲ್ಲಿದ್ದಾಗಲೇ ಮೃತಪಟ್ಟಿದ್ದು, ಈ ಪ್ರಕರಣವನ್ನು ಸಿಓಡಿ ತನಿಖೆಗೆ ವಹಿಸಲಾಗಿತ್ತು.
ಧನಂಜಯ ವಶದಲ್ಲಿದ್ದಾಗ ಮೃತಪಡಲು ಕಾರಣರಾಗಿದ್ದ ಸಬ್ಇನ್ಸ್ಪೆಕ್ಟರ್ ನಾಗೇಶ್, ಮುಖ್ಯಪೇದೆಗಳಾದ ಬಸವಣ್ಣಯ್ಯ, ಗೋವಿಂದಯ್ಯ, ಪೇದೆಗಳಾದ ಎಲ್.ಕುಮಾರ ಹಾಗೂ ನಾಗೇಗೌಡ ಅವರು ಅಲ್ಲಿಂದ ಇಲ್ಲಿಯವರೆಗೆ ತಲೆ ಮರೆಸಿಕೊಂಡಿದ್ದಾರೆ.
ಕಳೆದೆರಡು ತಿಂಗಳಿನಿಂದ ಈ ಐವರು ಪೊಲೀಸರ ಸುಳಿವು ಸಿಓಡಿ ಪೊಲೀಸರಿಗೆ ದೊರೆತಿಲ್ಲ. ಇವರ ಬಗ್ಗೆ ಮಾಹಿತಿ ದೊರೆತವರು ಸಿಓಡಿ ಪೊಲೀಸರಿಗಾಗಲಿ, ಕಂಟ್ರೋಲ್ ರೂಂಗಳಿಗಾಗಲಿ ಸಂಪರ್ಕಿಸಬಹುದು. |