ಜನರಲ್ಲಿ ಕನ್ನಡ ಜಾಗೃತಿ ಮೂಡಿಸಲು ಜೂನ್ನಿಂದ ನಾಡು-ನುಡಿ ಜಾಗೃತಿ ಜಾಥ ನಡೆಸಲು ಕನ್ನಡ ಅಭಿವೃದ್ದಿ ಪ್ರಾಧಿಕಾರ ನಿರ್ಧರಿಸಿದೆ. ಪರಭಾಷಿಕರು ಹೆಚ್ಚಿರುವ ಬೆಂಗಳೂರು ನಗರದ ಎಲ್ಲ 28 ವಿಧಾನಸಭಾ ಕ್ಷೇತ್ರಗಳಲ್ಲಿ ಹಾಗೂ ಗಡಿ ಜಿಲ್ಲೆಗಳಲ್ಲಿ ಈ ಜಾಗೃತಿ ಜಾಥಾ ನಡೆಯಲಿದ್ದು, ನಂತರ ರಾಜ್ಯದ ಮೂಲೆಮೂಲೆಯಲ್ಲೂ ಜಾಥಾ ನಡೆಸಲು ತೀರ್ಮಾನಿಸಿದೆ ಎಂದು ಪ್ರಾಧಿಕಾರದ ಅಧ್ಯಕ್ಷ ಮುಖ್ಯಮಂತ್ರಿ ಚಂದ್ರು ತಿಳಿಸಿದ್ದಾರೆ.
ಸಾಹಿತಿ ಕಲಾವಿದರನ್ನು ಒಳಗೊಂಡ ಈ ಜಾಥಾ ಪಕ್ಷಾತೀತವಾಗಿದ್ದು ಎಲ್ಲ ರಾಜಕೀಯ ಪಕ್ಷಗಳ ಜನಪ್ರತಿನಿಧಿಗಳನ್ನು ಸೇರ್ಪಡೆ ಮಾಡಿಕೊಂಡು ಕನ್ನಡ ಭಾಷೆಯ ಬಗ್ಗೆ ಜಾಗೃತಿ ಮೂಡಿಸುವ ಪ್ರಯತ್ನ ನಡೆಸಲಾಗುವುದು. ಜನಸಂದಣಿ ಪ್ರದೇಶಗಳಲ್ಲಿ ಕರಪತ್ರಗಳ ವಿತರಣೆ, ಸಾಹಿತಿ ಮತ್ತು ಕಲಾವಿದರಿಂದ ಸಂದೇಶ ಕೊಡಿಸುವ ಮೂಲಕ ಕನ್ನಡ ಬಳಸುವಂತೆ ಜನರಲ್ಲಿ ಅರಿವು ಮೂಡಿಸಲಾಗುವುದು ಎಂದು ಅವರು ಹೇಳಿದರು.
ಕನ್ನಡ ಅನುಷ್ಠಾನ ವರ್ಷದ ಅಂಗವಾಗಿ ಕನ್ನಡ ಭಾಷಾ ನಾಮಫಲಕ ಅಳವಡಿಸದ 5 ಸಾವಿರ ಮಂದಿಗೆ ಈಗಾಗಲೇ ನೋಟಿಸ್ ಜಾರಿ ಮಾಡಲಾಗಿದೆ. ಚುನಾವಣಾ ನೀತಿ ಸಂಹಿತೆ ಹಿನ್ನೆಲೆಯಲ್ಲಿ ಕನ್ನಡ ಅನುಷ್ಠಾನ ಕಾರ್ಯದಲ್ಲಿ ಸ್ವಲ್ಪ ವಿಳಂಬವಾಗಿದ್ದು, ಚುನಾವಣಾ ಫಲಿತಾಂಶ ಪ್ರಕಟವಾದ ಬಳಿಕ ಈ ಪ್ರಯತ್ನ ಮತ್ತಷ್ಟು ಚುರುಕಾಗಿ ನಡೆಯಲಿದೆ ಎಂದು ಅವರು ತಿಳಿಸಿದರು. |