ಮುಖ್ಯಮಂತ್ರಿ ನಿವಾಸ ಹಾಗೂ ಸಚಿವರ ನಿವಾಸ ನವೀಕರಣದಲ್ಲಿ ಭ್ರಷ್ಟಾಚಾರ ನಡೆದಿದೆ ಎಂಬ ವಿಷಯ ವಿವಾದಕ್ಕೆ ಎಡೆಯಾಗುತ್ತಿರುವಂತೆಯೇ, ಇದೀಗ 1999ರಿಂದ ಇಲ್ಲಿಯವರೆಗೆ ಸಿಎಂ ಮತ್ತು ಸಚಿವರ ಅಧಿಕೃತ ಹಾಗೂ ಖಾಸಗಿ ನಿವಾಸ ನವೀಕರಣಕ್ಕೆ ಈವರೆಗೆ ಖರ್ಚು ಮಾಡಿದ ಹಣದ ಮೊತ್ತ 26.85 ಕೋಟಿ. ಅಲ್ಲದೇ ಅತಿ ಹೆಚ್ಚು ಖರ್ಚು ಎಸ್.ಎಂ.ಕೃಷ್ಣ ಕಾಲಾವಧಿಯಲ್ಲಿ ಆಗಿದೆ.ಲೋಕೋಪಯೋಗಿ ಇಲಾಖೆಯ ಮಾಹಿತಿ ಪ್ರಕಾರ ಎಸ್.ಎಂ.ಕೃಷ್ಣ ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಒಟ್ಟು 10.04ಕೋಟಿ ರೂಪಾಯಿ ಖರ್ಚು ಮಾಡಿದ್ದು, ಅದರಲ್ಲಿ ಪೀಠೋಪಕರಣ ಖರೀದಿಗೆ 6.48ಕೋಟಿ ರೂ. ಮತ್ತು ಕಟ್ಟಡ ನವೀಕರಣಕ್ಕೆ 3.55ಕೋಟಿ ರೂ.ವೆಚ್ಚ ಮಾಡಲಾಗಿದೆ.ಧರಂಸಿಂಗ್ ಅವಧಿಯಲ್ಲಿ ಒಟ್ಟು 7.04ಕೋಟಿ ರೂ.ಖರ್ಚು. ಎಚ್.ಡಿ.ಕುಮಾರಸ್ವಾಮಿ ಅವಧಿಯಲ್ಲಿ ಅವರ ಮತ್ತು ಸಂಪುಟ ದರ್ಜೆ ಸಚಿವರ ಮನೆಗಳ ನವೀಕರಣಕ್ಕೆ ಮತ್ತು ಪೀಠೋಪಕರಣಗಳ ಖರೀದಿಗೆ ಒಟ್ಟು 6.90ಕೋಟಿ ರೂ. ಖರ್ಚು ಮಾಡಲಾಗಿತ್ತು. ಇದಾದ ನಂತರ ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದು, ಈವರೆಗೆ ಒಟ್ಟು 2.86ಕೋಟಿ ಖರ್ಚು ಮಾಡಲಾಗಿದೆ. ಕಟ್ಟಡ ನವೀಕರಣಕ್ಕೆ 62.30ಲಕ್ಷ, ಪೀಠೋಪಕರಣ ಖರೀದಿಗೆ 2.24 ಕೋಟಿ ರೂ.ವ್ಯಯಿಸಲಾಗಿದೆ. ಧರಂಸಿಂಗ್ ಮತ್ತು ಕುಮಾರಸ್ವಾಮಿ ಅಧಿಕಾರಕ್ಕೆ ಬಂದಾಗ ಅನುಗ್ರಹದ ಮೇಲೆ ಸಾಕಷ್ಟು ಹಣ ಖರ್ಚು ಮಾಡಲಾಗಿತ್ತು. ಆದರೆ ಯಡಿಯೂರಪ್ಪ ಮುಖ್ಯಮಂತ್ರಿಯಾದ ಮೇಲೆ ಅವರು ಅನುಗ್ರಹಕ್ಕೆ ತಮ್ಮ ಮನೆ ಸ್ಥಳಾಂತರ ಮಾಡಲಿಲ್ಲ. ರೇಸ್ಕೋರ್ಸ್ ರಸ್ತೆಯ ಬಂಗ್ಲೆಯಲ್ಲೇ ವಾಸ್ತವ್ಯ ಹೂಡಿದ್ದಾರೆ. |