ಕ್ಯಾತಮಾರನಹಳ್ಳಿ ಘರ್ಷಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕರ್ತವ್ಯಲೋಪ ಎಸಗಿದ ಆರೋಪದ ಮೇಲೆ ಉದಯಗಿರಿ ಠಾಣೆಯ ಎಸ್.ಐ. ಹಾಗೂ 12ಮಂದಿ ಕಾನ್ಸ್ಟೇಬಲ್ಗಳನ್ನು ವರ್ಗಾವಣೆ ಮಾಡಿ ನಗರ ಪೊಲೀಸ್ ಆಯುಕ್ತರು ಶುಕ್ರವಾರ ಆದೇಶ ಹೊರಡಿಸಿದ್ದಾರೆ.
ನಗರದ ಕ್ಯಾತಮಾರನಹಳ್ಳಿಯಲ್ಲಿ ಎರಡು ಕೋಮುಗಳ ನಡುವೆ ಸಂಭವಿಸಿದ ಘರ್ಷಣೆ ಸಂದರ್ಭದಲ್ಲಿ ಹಾಗೂ ಇತ್ತೀಚೆಗೆ ಪ್ರಕರಣಕ್ಕೆ ಸಂಬಂಧಿಸಿದಂತೆ ಶಂಕಿತರನ್ನು ಬಂಧಿಸಿದಾಗ ನಡೆದ ಪ್ರತಿಭಟನೆಯ ಸಮಯದಲ್ಲೂ ಕರ್ತವ್ಯಲೋಪ ಎಸಗಿದ್ದಾರೆಂದು ದೂರಿ ಎಸ್.ಐ.ಪ್ರಕಾಶ್ ಹಾಗೂ 12ಮಂದಿ ಪೊಲೀಸ್ ಕಾನ್ಸ್ಟೇಬಲ್ಗಳನ್ನು ಎತ್ತಂಗಡಿ ಮಾಡಲಾಗಿದೆ.
ಏಪ್ರಿಲ್ 1ರಂದು ಕ್ಯಾತಮಾರನಹಳ್ಳಿಯಲ್ಲಿ ಉದ್ಭವಿಸಿದ ಕೋಮುಗಲಭೆ ಒಂದು ವಾರಗಳ ಕಾಲ ಭೀತಿಯನ್ನು ಮೂಡಿಸಿತ್ತು. ಪ್ರದೇಶದಾದ್ಯಂತ ನಿಷೇಧಾಜ್ಞೆಯನ್ನೂ ಕೂಡ ಜಾರಿ ಮಾಡಲಾಗಿತ್ತು. ಆಟೋ, ಎತ್ತಿನಗಾಡಿ, ಅಂಗಡಿ, ಬೈಕ್ಗಳೆಲ್ಲಾ ಬೆಂಕಿಗೆ ಆಹುತಿಯಾಗಿದ್ದವು.ಗಲಭೆ ನೆಪದಲ್ಲಿ ಲೂಟಿ ನಡೆದಿತ್ತು. ಹಲವಾರು ಮಂದಿ ಚಿನ್ನಾಭರಣ, ಹಣ ಕಳೆದುಕೊಂಡಿದ್ದರು.
ಅಲ್ಲದೇ ಕ್ಯಾತಮಾರನಹಳ್ಳಿ ಕೋಮುಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ 13ಮಂದಿಯನ್ನು ಪೊಲೀಸರು ಇತ್ತೀಚೆಗೆ ಬಂಧಿಸಿದ್ದಾಗ, ಅವರನ್ನು ಕೂಡಲೇ ಬಿಡುಗಡೆ ಮಾಡಬೇಕೆಂದು ಒತ್ತಾಯಿಸಿ ಒಂದು ಸಮುದಾಯದ ಗುಂಪು ಠಾಣೆಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿತ್ತು. |