ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಗೆ ಕೂಡಲೇ ಚುನಾವಣೆ ನಡೆಯಬೇಕೆಂದು ಆಗ್ರಹಿಸಿರುವ ಕಾಂಗ್ರೆಸ್, ಅನಗತ್ಯ ನೆಪಗಳನ್ನು ಒಡ್ಡಿ ಚುನಾವಣೆ ಮುಂದೂಡಿದರೆ ಉಗ್ರಹೋರಾಟ ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದೆ.
ಬಿಬಿಎಂಪಿ ಚುನಾವಣೆ ಸಂಬಂಧ ಶುಕ್ರವಾರ ಕಾಂಗ್ರೆಸ್ ಪಕ್ಷದ ಮುಖಂಡರೊಂದಿಗೆ ಮಹತ್ವದ ಸಮಾಲೋಚನೆ ನಡೆಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಕೆಪಿಸಿಸಿ ಅಧ್ಯಕ್ಷ ಆರ್.ವಿ. ದೇಶಪಾಂಡೆ, ಸರ್ಕಾರ ಚುನಾವಣೆ ಮುಂದೂಡುವ ಯತ್ನ ನಡೆಸಿದೆ. ಅದೇ ರೀತಿ ಮುಂದುವರಿದರೆ ಕಾಂಗ್ರೆಸ್ ಪಕ್ಷ ಬೀದಿಗಿಳಿದು ಹೋರಾಟ ಮಾಡಲಿದೆ ಎಂದು ಹೇಳಿದರು.
ಸರ್ಕಾರಕ್ಕೆ ಚುನಾವಣೆ ಮಾಡುವ ಮನಸ್ಸಿಲ್ಲ. ಚುನಾವಣೆ ಪ್ರಶ್ನೆಯಾಗಿಯೇ ಕಾಣುತ್ತಿದೆ. ನಾಚಿಕೆಗೇಡಿನ ಸರ್ಕಾರ ತಕ್ಷಣವೇ ಚುನಾವಣೆ ನಡೆಸಬೇಕು ಎಂದು ಅವರು ಆಗ್ರಹಿಸಿದರು.
ಹೈಕೋರ್ಟ್ ಆದೇಶ ನೀಡಿದರೂ ಸಹ ಸರ್ಕಾರ ಎಚ್ಚೆತ್ತುಕೊಂಡಿಲ್ಲ. ಕ್ಷೇತ್ರ ಪುನರ್ ವಿಂಗಡಣೆ, ಮತದಾರರ ಪಟ್ಟಿ ಮೀಸಲು ಯಾವ ಕೆಲಸಗಳನ್ನೂ ಈ ಸರ್ಕಾರ ಮಾಡಿಲ್ಲ ಎಂದು ದೇಶಪಾಂಡೆ ಆರೋಪಿಸಿದರು.
|