ರಾಜ್ಯದ ಪ್ರಮುಖ ಸಂಚಾರ ವಲಯದಲ್ಲಿರುವ ಶಿರಾಡಿ ಘಾಟ್ ರಸ್ತೆಯಲ್ಲಿ ಮೊದಲ ಹಂತದ ದುರಸ್ಥಿ ಮತ್ತು ನಿರ್ವಹಣಾ ಕಾಮಗಾರಿಯನ್ನು ಪೂರ್ಣಗೊಳಿಸಿರುವ ರಾಷ್ಟ್ರೀಯ ಹೆದ್ದಾರಿ ವಲಯವು ಮಳೆಗಾಲದಲ್ಲಿ ವಾಹನ ಸಂಚಾರಕ್ಕೆ ಯಾವುದೇ ರೀತಿಯ ಅಡ್ಡಿ ಉಂಟಾಗದಂತೆ ಕ್ರಮ ಕೈಗೊಳ್ಳಲು ಮುಂದಾಗಿದೆ.
ವಾಹನ ಸಂಚಾರಕ್ಕೆ ಇದ್ದ ಎಲ್ಲ ತೊಂದರೆಗಳನ್ನು ಪರಿಹರಿಸಿರುವ ಇಲಾಖೆ ಈಗ ಎರಡನೇ ಹಂತದಲ್ಲಿ 10 ಕೋಟಿ ರೂಪಾಯಿ ಮೊತ್ತದಲ್ಲಿ ತಡೆಗೋಡೆ ನಿರ್ಮಾಣ ಚರಂಡಿಗಳಲ್ಲಿ ತುಂಬಿರುವ ಮಣ್ಣು ತೆಗೆಯುವುದು, ಅಡ್ಡ ಮೋರಿಗಳನ್ನು ಸ್ವಚ್ಛಗೊಳಿಸುವುದು ಮತ್ತು ಅಲ್ಯುಮಿನಿಯಂ ತಡೆಗಟ್ಟು ಅಳವಡಿಕೆ ಕಾಮಗಾರಿಯ ಅನುಷ್ಠಾನಕ್ಕೆ ಚಾಲನೆ ನೀಡಲಾಗಿದೆ.
ನೂತನ ಕಾಮಗಾರಿಗಳಿಗೆ ಕೇಂದ್ರ ಭೂ ಸಾರಿಗೆ ಸಚಿವಾಲಯದ ಅಂಗೀಕಾರ ಪಡೆದು ಈಗಾಗಲೇ ಟೆಂಡರ್ ಪ್ರಕ್ರಿಯೆ ಪೂರ್ಣಗೊಳಿಸಲಾಗಿದೆ. ಲೋಕಸಭಾ ಚುನಾವಣೆ ನಡೆಯುತ್ತಿದ್ದ ಸಂದರ್ಭದಲ್ಲಿ ಕೇಂದ್ರ ಚುನಾವಣಾ ಆಯೋಗದ ವಿಶೇಷ ಅನುಮತಿ ಮೇರೆಗೆ ಈ ಪ್ರಕ್ರಿಯೆಯನ್ನು ಪೂರ್ಣಗೊಳಿಸಲಾಗಿದೆ. ಜೂನ್ 15 ರೊಳಗೆ ಉಳಿದ ಕಾಮಗಾರಿಗಳನ್ನು ಪೂರ್ಣಗೊಳಿಸಲು ಅಧಿಕಾರಿಗಳು ಸಿದ್ಧತೆ ನಡೆಸುತ್ತಿದ್ದಾರೆ. |