ದ್ವಿತೀಯ ಪಿಯುಸಿ ಫಲಿತಾಂಶದಲ್ಲಿ ಶೂನ್ಯ ಸಂಪಾದನೆ ಮಾಡಿರುವ ರಾಜ್ಯದ 74 ಕಾಲೇಜುಗಳಿಗೆ ತಜ್ಞರ ತಂಡಗಳನ್ನು ಕಳಿಸಿ ವರದಿ ಪಡೆದುಕೊಂಡ ನಂತರ ಸೂಕ್ತ ಕ್ರಮ ತೆಗೆದುಕೊಳ್ಳಲು ಪದವಿಪೂರ್ವ ಶಿಕ್ಷಣ ಇಲಾಖೆ ನಿರ್ಧರಿಸಿದೆ.
ಒಟ್ಟು 28 ಸರ್ಕಾರಿ ಕಾಲೇಜುಗಳು ಸೇರಿದಂತೆ 74 ಪಿಯು ಕಾಲೇಜುಗಳಲ್ಲಿ ಒಬ್ಬ ವಿದ್ಯಾರ್ಥಿಯೂ ತೇರ್ಗಡೆ ಹೊಂದಿಲ್ಲ. ಈ ವಿಚಾರವನ್ನು ಇಲಾಖೆ ಗಂಭೀರವಾಗಿ ಪರಿಗಣಿಸಿದ್ದು, ತಜ್ಞರ ತಂಡಗಳನ್ನು ಇಂತಹ ಕಾಲೇಜುಗಳಿಗೆ ಕಳಿಸಿ ಇದಕ್ಕೆ ಕಾರಣ ಏನು ಎಂಬ ಬಗ್ಗೆ ವರದಿ ಪಡೆದುಕೊಳ್ಳಲಾಗುವುದು ಎಂದು ಇಲಾಖೆ ಆಯುಕ್ತ ಎಸ್.ಜಿ.ಹೆಗಡೆ ತಿಳಿಸಿದ್ದಾರೆ.
ಇಲಾಖೆ ಕಳಿಸಿಕೊಡುವ ತಂಡಗಳು ಸಂಬಂಧಪಟ್ಟ ಕಾಲೇಜುಗಳಿಗೆ ತೆರಳಿ ಉಪನ್ಯಾಸಕರು ಮತ್ತು ವಿದ್ಯಾರ್ಥಿಗಳ ಜೊತೆ ಸಮಾಲೋಚನೆ ನಡೆಸಿ ವಸ್ತುಸ್ಥಿತಿ ಅರಿತು ವರದಿ ಮಾಡಲಿವೆ. ಈ ಕಳಪೆ ಫಲಿತಾಂಶಕ್ಕೆ ಕಾರಣ ಏನೆಂದು ಪತ್ತೆ ಮಾಡಿದ ನಂತರ ಕ್ರಮ ಏನೆಂದು ನಿರ್ಧರಿಸಲಾಗುವುದು ಎಂದರು.
ಕಳೆದ ವರ್ಷ ಫಲಿತಾಂಶ ಬಹಳಷ್ಟು ಕುಸಿದಿದ್ದ ಹಿನ್ನೆಲೆಯಲ್ಲಿ ಉಪನ್ಯಾಸಕರ ಕೊರತೆಯನ್ನು ನಿವಾರಿಸಲಾಗಿತ್ತು. ಸುಮಾರು ಎರಡೂವರೆ ಸಾವಿರ ಉಪನ್ಯಾಸಕ ಹುದ್ದೆ ಖಾಲಿ ಇದ್ದ ಹಿನ್ನೆಲೆಯಲ್ಲಿ ಅತಿಥಿ ಉಪನ್ಯಾಸಕರ ನೇಮಕದ ಮೂಲಕ ಈ ಕೊರತೆ ನಿವಾರಿಸಲಾಗಿತ್ತು. ಆದರೂ ಫಲಿತಾಂಶ ಸುಧಾರಿಸದ ಹಿನ್ನೆಲೆಯಲ್ಲಿ ಕಾರಣಗಳನ್ನು ಪತ್ತೆ ಹಚ್ಚಲು ಇಲಾಖೆ ಮುಂದಾಗಿದೆ ಎಂದರು.
|