ಪತಿ ಮಹೇಂದರ್ ಅವರನ್ನು ತೊರೆದು ಮತ್ತೊಬ್ಬ ನಿರ್ದೇಶಕ ಚಕ್ರವರ್ತಿ ಚಂದ್ರಚೂಡ ಎಂಬಾತನನ್ನು ವರಿಸಿರುವ ನಟಿ ಶ್ರುತಿ ನಿಲುವಿಗೆ ಬಿಜೆಪಿ ಪಾಳಯದಲ್ಲಿ ತೀವ್ರ ವಿರೋಧ ವ್ಯಕ್ತವಾಗಿದೆ.
ಶಿಸ್ತಿನ ಪಕ್ಷವೆಂದೇ ಹೆಸರಾದ ಬಿಜೆಪಿ ವರ್ಚಸ್ಸಿಗೆ ಶ್ರುತಿ ಪ್ರಕರಣ ಧಕ್ಕೆ ಉಂಟು ಮಾಡಿದೆ. ಇದನ್ನು ನಿವಾರಿಸಲು ಮುಖಂಡರು ಮಾತುಕತೆ ನಡೆಸಿದರೂ ಕೂಡ ಯಾವುದೇ ಪ್ರಯೋಜವಾಗಿಲ್ಲ ಎಂದು ಪಕ್ಷದ ಮೂಲಗಳು ತಿಳಿಸಿವೆ.
ಮಹಿಳಾ ಅಭಿವೃದ್ದಿ ನಿಗಮದ ಅಧ್ಯಕ್ಷ ಸ್ಥಾನದಿಂದ ಶ್ರುತಿಯನ್ನು ತೆಗೆದು ಬೇರೊಬ್ಬರನ್ನು ನೇಮಿಸಲು ಮುಖಂಡರು ಮುಂದಾಗಿದ್ದಾರೆ. ಈ ಮಧ್ಯೆ ಬಿಜೆಪಿ ರಾಜ್ಯಾಧ್ಯಕ್ಷ ಸದಾನಂದ ಗೌಡ ಮಹೇಂದರ್ ಹಾಗೂ ಶ್ರುತಿ ನಡುವೆ ಸಂಧಾನ ನಡೆಸಲು ಯತ್ನಿಸಿ ವಿಫಲರಾಗಿದ್ದಾರೆ.
ಶ್ರುತಿ ತನ್ನ ತೀರ್ಮಾನದಿಂದ ಹಿಂದೆ ಸರಿಯದ ಕಾರಣ ಸದಾನಂದ ಗೌಡರು ಅಸಮಾಧಾನಗೊಂಡಿದ್ದಾರೆ. ಪಕ್ಷದ ಮುಖಂಡರೊಂದಿಗೆ ಚರ್ಚಿಸುವುದಾಗಿಯೂ ತಿಳಿಸಿದ್ದಾರೆ. ಈ ನಡುವೆ ಶ್ರುತಿ, ವಿಚ್ಛೇದನ ಅರ್ಜಿಗೆ ಕೂಡಲೇ ಸಹಿ ಹಾಕುವಂತೆ ಪತಿ ಮಹೇಂದರ್ ಅವರ ಮೇಲೆ ಒತ್ತಡ ತರುತ್ತಿದ್ದಾರೆ ಎನ್ನಲಾಗುತ್ತಿದೆ |