ಬಿಬಿಎಂಪಿ ಚುನಾವಣೆಯನ್ನು ಸಂಪುಟದ ನಿರ್ಧಾರದಂತೆ ಜುಲೈ ಅಂತ್ಯದೊಳಗೆ ನಡೆಸುವುದಾಗಿ ಘೋಷಿಸಿರುವ ಹಿನ್ನೆಲೆಯಲ್ಲಿ ಕಾರ್ಪೊರೇಟರ್ ಕನಸು ಕಾಣುತ್ತಿದ್ದವರೆಲ್ಲರೂ ಒಮ್ಮಿಂದೊಮ್ಮೆಗೆ ಚುರುಕಾಗಿದ್ದಾರೆ. ರಾಜಕೀಯ ಪಕ್ಷಗಳಲ್ಲಿ ಮತ್ತೊಮ್ಮೆ ಚಟುವಟಿಕೆ ಗರಿಗೆದರಿದೆ.
ಚುನಾವಣೆಯನ್ನು ಹೈಕೋರ್ಟ್ ಆದೇಶದಂತೆ ಆಗಸ್ಟ್ 1 ರ ಒಳಗಾಗಿ ನಡೆಸಬೇಕೆಂದು ಪಟ್ಟು ಹಿಡಿದಿರುವ ಕಾಂಗ್ರೆಸ್ ಪಾಳಯದಲ್ಲಿ ಚಟುವಟಿಕೆ ಆರಂಭವಾಗಿದೆ.
ತನ್ನ ತೆಕ್ಕೆಯಲ್ಲಿದ್ದ ಪಾಲಿಕೆ ಆಡಳಿತವನ್ನು ಉಳಿಸಿಕೊಳ್ಳಬೇಕೆನ್ನುವುದು ಕಾಂಗ್ರೆಸ್ ಉದ್ದೇಶ. ತನಗೆ ಅನುಕೂಲಕರವಾಗುವಂತೆ ವಾರ್ಡ್ಗಳ ಸಂಖ್ಯೆಯನ್ನು ಹೆಚ್ಚಿಸಿ ಬುದ್ದಿವಂತಿಕೆ ತೋರಿರುವ ಬಿಜೆಪಿಗೆ ಈ ಗದ್ದುಗೆ ಮೇಲೆ ಕಣ್ಣಿಟ್ಟಿದೆ. ಈಗಷ್ಟೇ ಲೋಕಸಭಾ ಚುನಾವಣೆ ಗಡಿಬಿಡಿ ಮುಗಿಸಿ ಸುಧಾರಿಸಿಕೊಳ್ಳುವ ಮುನ್ನವೇ ಇನ್ನೊಂದು ಚುನಾವಣೆ ನಡೆಸುವ ಕುರಿತು ಸರ್ಕಾರ ಕೈಗೊಂಡ ನಿರ್ಧಾರ ಸಹಜವಾಗಿಯೇ ಬಿಜೆಪಿ ಶಾಸಕರನ್ನು ಗಲಿಬಿಲಿಗೊಳಿಸಿದೆ. ಪಾಲಿಕೆ ಟಿಕೆಟ್ ಆಕಾಂಕ್ಷಿಗಳು ಚುನಾವಣೆಗೆ ತುದಿಗಾಲಿನಲ್ಲಿ ನಿಂತಿದ್ದರೆ, ಶಾಸಕರಂತೂ ಕೊಂಚ ಹಿಂದೇಟು ಹಾಕುತ್ತಿದ್ದಾರೆ.
147 ರಷ್ಟಿದ್ದ ವಾರ್ಡ್ಗಳ ಸಂಖ್ಯೆಯನ್ನು 198ಕ್ಕೆ ಹೆಚ್ಚಿಸಿರುವ ಸರ್ಕಾರದ ನಿರ್ಧಾರ ಚುನಾವಣೆಯನ್ನು ಜುಲೈ ಅಂತ್ಯದೊಳಗೆ ನಡೆಸಲು ಸಾಧ್ಯವೇ ಎಂಬುದು ರಾಜಕೀಯ ಪಂಡಿತರ ಲೆಕ್ಕಾಚಾರ.
ವಾರ್ಡ್ಗಳ ಸಂಖ್ಯೆಯನ್ನು ಹೆಚ್ಚಿಸುವ ವಿಚಾರದಲ್ಲೂ ಬಿಜೆಪಿ ತನ್ನ ಅನುಕೂಲವನ್ನು ನೋಡಿಕೊಂಡಿದೆ ಎನ್ನಲಾಗಿದೆ. ಹೊರವಲಯದಲ್ಲಿ 20,000 ಜನಸಂಖ್ಯೆಗೆ ಒಂದು ವಾರ್ಡ್ ಎಂಬಂತೆ ರಚಿಸಲಾಗುವುದು.
ಜೆಡಿಎಸ್ ಹಾಗೂ ಕಾಂಗ್ರೆಸ್ನಲ್ಲಿ ದೊಡ್ಡ ಪ್ರಮಾಣದ ಚಟುವಟಿಕೆ ಇನ್ನೂ ಆರಂಭವಾಗದಿದ್ದರೂ, ನಗರ ಪ್ರದೇಶದಲ್ಲಿ ತಾನೇನು ಕಡಿಮೆ ಇಲ್ಲ ಎಂದು ಸಡ್ಡು ಹೊಡೆಯಲು ಸಜ್ಜಾಗಿವೆ. |