ಸಂಸದ ಹಾಗೂ ನಟ ಅಂಬರೀಶ್ ಅವರ ಬಗ್ಗೆ ಜಗ್ಗೇಶ್ ನೀಡಿದ ಅವಹೇಳನಕಾರಿ ಹೇಳಿಕೆ ಖಂಡಿಸಿ ಸೋಮವಾರ ರಾಜಾಜಿನಗರದ ಸಾಂಸ್ಕೃತಿಕ ಸಂಘ ಜಗ್ಗೇಶ್ ಅವರ ಪ್ರತಿಕೃತಿ ದಹನ ಮಾಡುವ ಮೂಲಕ ಪ್ರತಿಭಟನೆ ನಡೆಸಿತು.
ಅಂಬರೀಶ್ ಅವರ ಮಾರ್ಗದರ್ಶನದಿಂದಲೇ ಚಿತ್ರರಂಗ ಪ್ರವೇಶಿಸಿದ ಜಗ್ಗೇಶ್, ಸ್ವಲ್ಪವೂ ಮರ್ಯಾದೆ ಕೊಡದೆ ಅಂಬರೀಶ್ ಸರ್ವೋಚ್ಚ ನಾಯಕರಲ್ಲ ಎಂದು ಹೇಳಿಕೆ ನೀಡಿದ್ದಾರೆ. ಇದು ಜಗ್ಗೇಶ್ ಅವರ ಅಹಂಕಾರದ ಪರಮಾವಧಿ ಎಂದು ಪ್ರತಿಭಟನೆ ವೇಳೆ ಅಭಿಮಾನಿಗಳು ಜಗ್ಗೇಶ್ ಅವರನ್ನು ತರಾಟೆಗೆ ತೆಗೆದುಕೊಂಡರು.
ತುರುವೆಕೆರೆ ಕ್ಷೇತ್ರದಲ್ಲಿ ಜನತೆಗೆ ಸುಳ್ಳು ಭರವಸೆಗಳನ್ನು ನೀಡಿ ಶಾಸಕರಾದ ಜಗ್ಗೇಶ್, ಇದೀಗ ಶಾಸಕ ಸ್ಥಾನವನ್ನೇ ಹಣಕ್ಕಾಗಿ ಮಾರಿಕೊಂಡು ಕ್ಷೇತ್ರದ ಜನತೆಗೆ ವಂಚಿಸಿದ್ದಾರೆ ಎಂದು ಕಿಡಿಕಾರಿದ ಪ್ರತಿಭಟನಾಕಾರರು ಅಂಬರೀಶ್ ಬಗ್ಗೆ ಮಾತನಾಡುವಷ್ಟು ಅರ್ಹರಲ್ಲ ಎಂದರು. ಅಂಬರೀಷ್ ವಿರುದ್ಧ ಅವಹೇಳನಕಾರಿಯಾಗಿ ಮಾತನಾಡಿರುವ ಜಗ್ಗೇಶ್ ಇನ್ನು 15 ದಿನದೊಳಗೆ ಕ್ಷಮೆ ಯಾಚಿಸಬೇಕು. ಇಲ್ಲದಿದ್ದಲ್ಲಿ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷರಿಗೆ ದೂರು ನೀಡಿ ಜಗ್ಗೇಶ್ಗೆ ಒಂದು ವರ್ಷಗಳ ಕಾಲಾವಧಿ ಅಭಿನಯಿಸಲು ಅವಕಾಶ ನೀಡಬಾರದು ಎಂದು ಒತ್ತಡ ಹೇರಲಾಗುವುದು ಎಂದರು. |