ಕನ್ನಡಕ್ಕೆ ಶಾಸ್ತ್ರೀಯ ಭಾಷೆಯ ಸ್ಥಾನಮಾನ ನೀಡುವ ಕೇಂದ್ರ ಸರ್ಕಾರದ ನಿರ್ಧಾರ ಕೇವಲ ಕಣ್ಣೊರೆಸುವ ತಂತ್ರವಾಗಿದ್ದು, ಇದರ ವಿರುದ್ಧ ಹೋರಾಟವನ್ನು ಮುಂದುವರಿಸುವುದಾಗಿ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮುಖ್ಯಮಂತ್ರಿ ಚಂದ್ರು ಸೋಮವಾರ ತಿಳಿಸಿದರು.
ಕೇಂದ್ರ ಸರ್ಕಾರ ಶಾಸ್ತ್ರೀಯ ಭಾಷೆಯ ಸ್ಥಾನಮಾನದ ಆದೇಶ ಹೊರಡಿಸುವಾಗ ಚೆನ್ನೈ ಹೈಕೋರ್ಟ್ನ ತೀರ್ಮಾನಕ್ಕೆ ಬದ್ಧವಾಗಿ ಎಂಬ ಪದವನ್ನು ಬಳಸಿದೆ. ಇತ್ತೀಚೆಗೆ ನಡೆದ ಕೇಂದ್ರ ಸಂಪುಟ ಸಭೆಯಲ್ಲಿ ತೆಗೆದುಕೊಂಡಿರುವ ನಿರ್ಧಾರದಲ್ಲಿ ಹೊಸದೇನೂ ಇಲ್ಲ ಎಂದು ಅವರು ಸುದ್ದಿಗಾರರೊಂದಿಗೆ ಮಾತನಾಡುತ್ತ ಹೇಳಿದರು.
ಕಳೆದ ಅಕ್ಟೋಬರ್ 31ರಂದು ಕೇಂದ್ರದ ಸಂಸ್ಕೃತಿ ಸಚಿವೆ ಅಂಬಿಕಾ ಸೋನಿ ಶಾಸ್ತ್ರೀಯ ಭಾಷೆ ಸ್ಥಾನಮಾನ ನೀಡುವ ಘೋಷಣೆ ಮಾಡಿದ್ದರು. ಅದಕ್ಕೆ ಈಗ ಅಧಿಕೃತ ಒಪ್ಪಿಗೆ ನೀಡಿದ್ದಾರೆ. ಈ ಪ್ರಕರಣ ಕೋರ್ಟ್ನಲ್ಲಿದ್ದರೂ ಕೂಡ ಆರ್ಥಿಕ ಸೌಲಭ್ಯ ನೀಡುತ್ತೇವೆ ಎಂದು ಘೋಷಣೆ ಮಾಡಿದ್ದರೆ ಅಭಿನಂದನೆ ಸಲ್ಲಿಸುತ್ತಿದ್ದೆವು ಎಂದರು.
ಕನ್ನಡ ಕೂಡ ತಮಿಳು ಭಾಷೆಯಷ್ಟೇ ಪುರಾತನವಾಗಿದೆ. ಆದ್ದರಿಂದ ಕಳೆದ 5ವರ್ಷಗಳಲ್ಲಿ ತಮಿಳು ಭಾಷೆಗೆ 750ಕೋಟಿ ರೂಪಾಯಿಷ್ಟು ಆರ್ಥಿಕ ನೆರವು ನೀಡಲಾಗಿದ್ದು, ಕನ್ನಡ ಭಾಷೆಯ ಅಭಿವೃದ್ಧಿಗೂ ಬಿಡುಗಡೆ ಮಾಡಬೇಕು ಎಂದು ಒತ್ತಾಯಿಸಿದರು. |