ಪೊಲೀಸರು ಶಂಕಿತರನ್ನು, ಆರೋಪಿತರನ್ನು ಬಂಧಿಸುವುದು ಸಾಮಾನ್ಯ. ವಕೀಲರು ಅಂತಹವರನ್ನು ಬಿಡುಗಡೆಗೊಳಿಸುವ ವಿಷಯ ಕೂಡ ಅಷ್ಟೇ. ಆದರೆ ಸೋಮವಾರ ವಕೀಲರೊಬ್ಬರನ್ನು ಬಂಧಿಸಲು ನ್ಯಾಯಾಲಯದ ಆವರಣಕ್ಕೆ ಆಗಮಿಸಿದ ಹೆಡ್ ಕಾನ್ಸ್ಟೇಬಲ್ರೊಬ್ಬರನ್ನು ವಕೀಲರೆಲ್ಲ ಸೇರಿ ಕೂಡಿ ಹಾಕಿರುವ ಘಟನೆ ನಡೆದಿದೆ.
ವಕೀಲ ಸಂತೋಷ್ ಕುಮಾರ್ ಎಂಬವರನ್ನು ಬಂಧಿಸಿ ಕರೆ ತರುವಂತೆ ಜೆಪಿ ನಗರ ಠಾಣೆಯ ಎಸ್.ಐ.ಶ್ರೀನಿವಾಸ್ ಹೇಳಿಕೆಯಂತೆ ಹೆಡ್ ಕಾನ್ಸ್ಟೇಬಲ್ ಮಂಜುನಾಥ್ ಅವರು ನ್ಯಾಯಾಲಯದ ಆವರಣಕ್ಕೆ ಬಂದಾಗ, ಸಂತೋಷ್ ಅವರು ವಾರಂಟ್ ಇಲ್ಲದೆ ಹೇಗೆ ಬಂಧಿಸುತ್ತೀರಿ ಎಂದು ಪ್ರಶ್ನಿಸಿದ್ದರು. ಈ ಸಂದರ್ಭದಲ್ಲಿ ಠಾಣೆಯ ಎಸ್.ಐ. ಶ್ರೀನಿವಾಸ್ ಅವರನ್ನು ಮೊಬೈಲ್ ಮೂಲಕ ಸಂಪರ್ಕಿಸಿದಾಗ ಅವಾಚ್ಯ ಶಬ್ದಗಳಿಂದ ಬೈದಿದ್ದರು. ಇದರಿಂದಾಗಿ ವಕೀಲರ ಸಮೂಹ ತೀವ್ರ ವಿರೋಧ ವ್ಯಕ್ತಪಡಿಸಿ, ಬಂಧನಕ್ಕೆ ಅವಕಾಶ ನೀಡುವುದಿಲ್ಲ ಎಂದು ಮಂಜುನಾಥ್ ಅವರನ್ನು ಥಳಿಸಿದ್ದಲ್ಲದೆ, ನಗರದ ಸಿವಿಲ್ ಹಾಗೂ ವಕೀಲ ಸಂಘಟನೆಯ ಕಟ್ಟಡದಲ್ಲಿ ಎರಡು ಗಂಟೆಗಳ ಕಾಲ ಕೂಡಿ ಹಾಕಿದ್ದರು.
ಘಟನೆ ವಿಷಯ ತಿಳಿದ ಹಿರಿಯ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ ಹೆಡ್ ಕಾನ್ಸ್ಟೇಬಲ್ ಮಂಜುನಾಥ್ ಅವರನ್ನು ವಕೀಲರ ಬಂಧನದಿಂದ ತಪ್ಪಿಸಿದ್ದರು. ವಾರಂಟ್ ಇಲ್ಲದೆ ಸಂತೋಷ್ ಅವರನ್ನು ಬಂಧಿಸಿದರೆ, ಉಗ್ರ ಹೋರಾಟ ನಡೆಸುವುದಾಗಿ ವಕೀಲರ ಸಂಘಟನೆ ಎಚ್ಚರಿಕೆ ನೀಡಿತ್ತು. ಬಳಿಕ ಹಿರಿಯ ಅಧಿಕಾರಿಗಳು ಪರಿಸ್ಥಿತಿಯನ್ನು ತಿಳಿಗೊಳಿಸಿದ್ದರು. |