ನಕ್ಸಲ್ಪೀಡಿತ ಮಲೆನಾಡು ಪ್ರದೇಶಗಳಲ್ಲಿ ಪೊಲೀಸರು ಕೆಲವು ಗಿರಿಜನ ನಾಯಕರನ್ನು ವಿಚಾರಣೆಗೆ ಒಳಪಡಿಸುತ್ತಿರುವುದನ್ನು ಸಮರ್ಥಿಸಿಕೊಂಡ ಗೃಹ ಸಚಿವ ಡಾ.ವಿ.ಎಸ್.ಆಚಾರ್ಯ ಸ್ಪಷ್ಟ ಮಾಹಿತಿ ಆಧರಿಸಿ ಈ ಕ್ರಮ ಕೈಗೊಳ್ಳಲಾಗುತ್ತಿದ್ದು, ಯಾರನ್ನೂ ಹಿಂಸಿಸುವ ಉದ್ದೇಶ ಇಲ್ಲ ಎಂದು ಹೇಳಿದರು.
ನಕ್ಸಲ್ ಸಮಸ್ಯೆಯನ್ನು ನಿವಾರಿಸಲು ಪೊಲೀಸರು ಜನರೊಂದಿಗೆ ನಿಕಟ ಸಂಪರ್ಕ ಇಟ್ಟುಕೊಂಡಿದ್ದಾರೆ. ಜನ ನೀಡುವ ಮಾಹಿತಿ ಆಧರಿಸಿ ಕೆಲವರನ್ನು ವಿಚಾರಣೆಗೆ ಒಳಪಡಿಸಲಾಗಿದೆ. ಆದರೆ ಬಂಧಿಸಿಲ್ಲ. ನಕ್ಸಲರಿಗೆ ಪ್ರತ್ಯಕ್ಷ ಅಥವಾ ಪರೋಕ್ಷವಾಗಿ ಸಹಕಾರ ನೀಡುತ್ತಿರುವವರನ್ನು ವಿಚಾರಣೆಗೆ ಗುರಿಪಡಿಸಲಾಗುತ್ತಿದೆ ಎಂದು ತಿಳಿಸಿದರು.
ನಕ್ಸಲ್ ಸಮಸ್ಯೆ ನಿವಾರಿಸಲು ಶಾಂತಿಯುತ ವಾತಾವರಣ ಕಲ್ಪಿಸಲು ಸರ್ಕಾರ ಬದ್ಧವಾಗಿದೆ. ಈ ದೃಷ್ಟಿಯಿಂದ ಅಭಿವೃದ್ದಿ ಆಯಾಮದಿಂದಲೂ ಮಹತ್ವದ ಕ್ರಮ ಕೈಗೊಳ್ಳಲಾಗುತ್ತಿದೆ. ಈ ಪ್ರದೇಶದಲ್ಲಿ ಅಗತ್ಯ ಮೂಲಭೂತ ಸೌಕರ್ಯ ಅಭಿವೃದ್ದಿಗೆ ಜಿಲ್ಲಾಧಿಕಾರಿಗಳು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು, ಜಿ.ಪಂ. ಕಾರ್ಯನಿರ್ವಹಣಾಧಿ ಕಾರಿಗಳು ಒಟ್ಟಾಗಿ ಶ್ರಮಿಸುವಂತೆ ಸೂಚನೆ ನೀಡಲಾಗಿದೆ ಎಂದು ಹೇಳಿದರು.
ಸಂಘಟಿತ ಅಪರಾಧ ತಡೆಗೆ ಸರ್ಕಾರ ತಂದಿರುವ ಕೋಕಾ ಕಾಯ್ದೆ ತಿದ್ದುಪಡಿ ಬಗ್ಗೆ ವಿಧಾನಮಂಡಲದಲ್ಲಿ ಚರ್ಚೆಗೆ ಸರ್ಕಾರ ಸಿದ್ಧವಿದೆ. ಚರ್ಚೆ ಆಗಬೇಕು ಎನ್ನುವುದು ಸರ್ಕಾರದ ಉದ್ದೇಶ. ಜೂನ್ ಅಂತ್ಯದೊಳಗೆ ವಿಧಾನಮಂಡಲ ಅಧಿವೇಶನ ಕರೆದರೆ ಅಲ್ಲಿ ಅದನ್ನು ಮಂಡಿಸಿ ಚರ್ಚೆಗೆ ಅವಕಾಶ ಕಲ್ಪಿಸಲಾಗುವುದು. ಅಧಿವೇಶನ ವಿಳಂಬವಾದರೆ ಮಾತ್ರ ಸುಗ್ರೀವಾಜ್ಞೆ ಮೂಲಕ ಕಾಯ್ದೆಯನ್ನು ಜಾರಿಗೊಳಿಸಲಾಗುವುದು ಎಂದು ಆಚಾರ್ಯ ಹೇಳಿದರು. |